ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅ.12: ಮದನಿ ನ್ಯಾಯಾಂಗ ಬಂಧನ ಮುಂದುವರಿಕೆ (Abdul Nasser Madani | Bangalore serial blast | Parappana Agrahara | judicial custody)
ಬೆಂಗಳೂರು, ಮಂಗಳವಾರ, 28 ಸೆಪ್ಟೆಂಬರ್ 2010( 19:34 IST )
ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಅಬ್ದುಲ್ ನಾಸಿರ್ ಮದನಿಗೆ ನಗರದ ನ್ಯಾಯಾಲಯ ಅಕ್ಟೋಬರ್ 12ರವರೆಗೆ ನ್ಯಾಯಾಂಗ ಬಂಧನವನ್ನು ಮುಂದುವರಿಸಿದೆ.
ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಕೇರಳದ ಪೀಪಲ್ಸ್ ಡೆಮೋಕ್ರಟಿಕ್ ಪಕ್ಷದ ಮುಖಂಡ ಮದನಿ ಹಾಗೂ ಇತರ 12 ಮಂದಿ ನಗರದ ಹೊರವಲಯದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಮಂಗಳವಾರ ಪ್ರಥಮ ಸಹಾಯಕ ಮುಖ್ಯ ಮೆಟ್ರೋಪೋಲಿಟನ್ ಮ್ಯಾಜಿಸ್ಟ್ರೇಟ್ ವೆಂಕಟೇಶ್ ಹುಳಗಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದರು.
ಮದನಿ ಹಾಗೂ ಪ್ರಮುಖ ರೂವಾರಿ ಟಿ.ನಾಜಿರ್ ಸೇರಿದಂತೆ ಒಟ್ಟು 14 ಮಂದಿ ಆರೋಪಿಗಳನ್ನು ಇಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ 14 ಆರೋಪಿಗಳ ಹೆಸರನ್ನು ಕೂಗಿದಾಗ ಒಬ್ಬೊಬ್ಬರೇ ಕೈ ಎತ್ತುವ ಮೂಲಕ ತಮ್ಮ ಹಾಜರಾತಿಯನ್ನು ಖಚಿತಪಡಿಸಿದರು. ಬಳಿಕ ಆರೋಪಿಗಳನ್ನು ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು.
ಸರಣಿ ಸ್ಫೋಟದ 32 ಮಂದಿ ಆರೋಪಿಗಳಲ್ಲಿ ಕೆಲವು ವರ್ಷದ ಹಿಂದೆ ಕಾಶ್ಮೀರ ಗಡಿಭಾಗದಲ್ಲಿ ಸೆಂಟ್ರಲ್ ಕ್ರೈಮ್ ಬ್ರಾಂಚ್ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದರು. ಅಲ್ಲದೇ ನಾಲ್ಕು ಮಂದಿ ಆರೋಪಿಗಳು ಈಗಲೂ ತಲೆಮರೆಸಿಕೊಂಡಿದ್ದಾರೆ. ಹತ್ತು ಮಂದಿ ಆರೋಪಿಗಳು ಗುಜರಾತ್ ಮತ್ತು ಮಧ್ಯಪ್ರದೇಶ ಜೈಲಿನಲ್ಲಿದ್ದಾರೆ. ಉಳಿದ 14 ಮಂದಿ ಬೆಂಗಳೂರಿನ ಜೈಲಿನಲ್ಲಿದ್ದಾರೆ.
ಏತನ್ಮಧ್ಯೆ, ಆರೋಪಿ ಅಬ್ದುಲ್ ನಾಸಿರ್ ಮದನಿಯ ಕೋಣೆ ಮತ್ತು ಸ್ನಾನದ ಕೋಣೆಯಲ್ಲಿ ರಿಮೋಟ್ ಕ್ಯಾಮರಾ ಅಳವಡಿಸಿರುವ ಬಗ್ಗೆ ಮದನಿ ಪರ ವಕೀಲ ಪಿ.ಎಸ್.ಉಸ್ಮಾನ್ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ದೂರಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ ಹಲವಾರು ಬಾರಿ ಮನವಿ ಮಾಡಿಕೊಂಡರು ಕೂಡ ಪೊಲೀಸರು ಮದನಿ ವಿರುದ್ಧ ದಾಖಲಿಸಿದ ಆರೋಪಪಟ್ಟಿಯ ಪ್ರತಿಯನ್ನು ಕೊಟ್ಟಿಲ್ಲ ಎಂದು ದೂರಿದ್ದಾರೆ.