ಕಾಂಗ್ರೆಸ್ ಪಕ್ಷದಲ್ಲಿನ ಒಡಕು ಮತ್ತು ಅಸಂಘಟಿತ ಕೆಲಸದಿಂದಾಗಿ ಗುಲ್ಬರ್ಗ ದಕ್ಷಿಣ ಕ್ಷೇತ್ರದ ಮರು ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಸೋಲಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಎನ್. ಧರಂ ಸಿಂಗ್ ವಿಶ್ಲೇಷಿಸಿದ್ದಾರೆ.
ಚುನಾವಣೆಯಲ್ಲಿ ಜನರು ಕಾಂಗ್ರೆಸ್ಸನ್ನು ಸೋಲಿಸಿಲ್ಲ, ಇನ್ನಷ್ಟು ಪ್ರಯತ್ನ ಮಾಡಿದ್ದರೆ ನಾವು ಗೆಲ್ಲುತ್ತಿದ್ದೆವು. ಗೆಲುವಿನ ಹತ್ತಿರ ಬಂದು ಸೋಲು ಅನುಭವಿಸಿದ್ದೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಮುಂದೆಯಾದರೂ ನಾವು ಸಂಘಟಿತರಾಗಿ ಒಗ್ಗಟ್ಟಿನಿಂದ ಕೆಲಸ ಮಾಡದೆ ಹೋದರೆ, ಇದೇ ರೀತಿಯಾಗಿ ದೌರ್ಬಲ್ಯಗಳು ಮುಂದುವರೆದರೆ ಪಕ್ಷದ ಭವಿಷ್ಯಕ್ಕೆ ಹೊಡೆತ ಬೀಳಲಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಜಾತಿವಾರು ಲಾಬಿ ನಡೆಸುತ್ತಿರುವುದು ಸೂಕ್ತವಲ್ಲ. ಅಧ್ಯಕ್ಷಗಿರಿಗೆ ಜಾತಿಯೊಂದೇ ಆಧಾರವಲ್ಲ, ಬದಲಾಗಿ ಎಲ್ಲರೂ ಸೇರಿಕೊಂಡು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಧರಂ ಸಿಂಗ್ ಉತ್ತರಿಸಿದರು.
ಅಯೋಧ್ಯೆ ವಿವಾದಿತ ಜಮೀನು ಕುರಿತಂತೆ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ. ಇಂತಹ ವೇಳೆಯಲ್ಲಿ ಸಂಘ ಪರಿವಾರದವರು ಇದು ತಮಗೆ ಸಿಕ್ಕ ಜಯ ಎಂದು ಹೇಳಿಕೊಂಡಿರುವುದು ಸರಿಯಲ್ಲ ಎಂದರು.
ಇಂತಹ ಸಂದರ್ಭ ಆ ತೆರನಾದ ಹೇಳಿಕೆ ನೀಡುವುದರಿಂದ ಭಾವನೆಗೆ ಪ್ರಚೋದನೆ ನೀಡದಂತಾಗುತ್ತದೆ. ಮುಂದಾಗುವ ಅನಾಹುತಕ್ಕೆ ಅವರೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗುಲ್ಬರ್ಗದ ಜನತೆಗೆ ಬಿಜೆಪಿ ಸರಕಾರ ಮತ್ತೊಮ್ಮೆ ಮೂಗಿಗೆ ತುಪ್ಪ ಹಚ್ಚಲು ಬರುತ್ತಿದೆ. ಅದಕ್ಕಾಗಿ ಸಚಿವ ಸಂಪುಟ ಸಭೆ ಎಂಬ ಹೆಸರಿನ್ನಿಟ್ಟುಕೊಂಡು ಬರುತ್ತಿದ್ದು ಇದರಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದು ಧರಂ ಸಿಂಗ್ ಹೇಳಿದರು.