ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಗಣಿ ಧಣಿ ರಡ್ಡಿಗಳಿಂದಲೇ ಏಪ್ರಿಲ್ ವೇಳೆಗೆ ಸರಕಾರ ಪತನವಾಗುವುದು ನಿಶ್ಚಿತ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಭವಿಷ್ಯ ನುಡಿದಿದ್ದಾರೆ.
ಅವರು ಯಡಹಳ್ಳಿ ಗ್ರಾಮದಿಂದ ಬರುತ್ತಿದ್ದಾಗ ಮುಧೋಳ ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಮ್ಮ ಖುರ್ಚಿ ಆಸೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲಿಂಗಾಯತರ ಓಲೈಕೆಯಲ್ಲಿ ತೊಡಗಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಬರುವ ಮುಖ್ಯಮಂತ್ರಿಗಳು ಲಿಂಗಾಯತ ಸಮಾಜ ಕಡೆಗಣಿಸುವಂತಹ ಪ್ರೇರಣೆ ನೀಡುವಂತಾಗಿದೆ. ಒಂದೇ ಕೋಮಿನ 13 ಜನ ಸಚಿವರ ಬದಲು ಎಲ್ಲ ಸಮಾಜದವರಿಗೆ ಖಾತೆ ಹಂಚಿಕೆ ಮಾಡಿದ್ದರೆ ಈ ದುರ್ಗತಿ ಬರುತ್ತಿರಲಿಲ್ಲ ಎಂದರು.
ಹಿಂದಿನ ಯಾವುದೇ ಮುಖ್ಯಮಂತ್ರಿಗಳೂ ಸಹ ಇಷ್ಟು ಜಾತಿ ಲಾಬಿ ಮಾಡಿರಲಿಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕದ ಸ್ವಾಮೀಜಿಯವರನ್ನು ಬೇರೆ ಬೇರೆ ಪಕ್ಷಗಳ ನಾಯಕರು ಹೀನಾಯವಾಗಿ ಕಾಣುವಂತೆ ನಿರ್ಮಾಣ ಮಾಡಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲಬೇಕೆಂದು ಆರೋಪಿಸಿದರು.
ರಾಜ್ಯದಲ್ಲಿ ಆಡಳಿತ ವ್ಯವವಸ್ಥೆ ಸಂಪೂರ್ಣ ಕುಸಿದಿದೆ. ಅಭಿವೃದ್ದಿ ಕಾರ್ಯಗಳಾಗುತ್ತಿಲ್ಲ. ರಾಜ್ಯದ ಮಾನ ಹರಾಜು ಮಾಡಲು ಮತ್ತೆ ಶೋಭಾ, ಸೋಮಣ್ಣರನ್ನು ಸಚಿವರನ್ನಾಗಿ ಮಾಡಿ ತಾವೇ ರಚಿಸಿದ ಜೇಡರ ಬಲೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾರೆಂದು ವ್ಯಂಗವಾಡಿದರು.