ಮುಖ್ಯಮಂತ್ರಿ ಸ್ಥಾನದಿಂದ ಇನ್ನೂ ಎರಡೂವರೆ ವರ್ಷಗಳ ಕಾಲ ಯಾರು ನನ್ನನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 11 ಶಾಸಕರ ಅನರ್ಹತೆ ಪ್ರಕರಣದ ಕುರಿತು ಹೈಕೋರ್ಟ್ ಸ್ಪೀಕರ್ ತೀರ್ಪನ್ನು ಎತ್ತಿ ಹಿಡಿದು ಆದೇಶ ನೀಡಿದ್ದಕ್ಕೆ ಪೂರಕವಾಗಿ ಕಾರ್ಯಕ್ರಮವೊಂದರಲ್ಲಿ ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ರಾಜ್ಯ ಮಟ್ಟದ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಎಂತಹ ರಾಜಕೀಯ ಜಂಜಾಟದಲ್ಲೂ ಮುಖ್ಯಮಂತ್ರಿಯಾಗಿ ಉಳಿದಿರುವ ನನ್ನನ್ನು ಭಂಡ ಎನ್ನದಿರಿ ಎಂದು ವಿನಂತಿಸಿದರು.
ಅಲ್ಲಮಪ್ರಭುಗಳ ವಚನದಂತೆ ಕೊಟ್ಟ ಕುದುರೆಯನ್ನು ಏರದವನು ಧೀರನೂ ಅಲ್ಲ, ಶೂರನೂ ಅಲ್ಲ ಎಂಬ ಮಾತಿನಂತೆ ಅಧಿಕಾರ ಸಿಕ್ಕಿದೆ. ಅದನ್ನು ಎಂತಹ ಪರಿಸ್ಥಿತಿ ಬಂದರೂ ನಿಭಾಯಿಸಿಕೊಂಡು ಹೋಗಲಿದ್ದೇನೆ ಎಂದರು.
ರಾಜಕೀಯ ಜಂಜಾಟಗಳಿಂದ ಸ್ವಲ್ಪ ವಿಚಲಿತನಾಗಿರಬಹುದು. ಆದರೆ, ಅದನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಇನ್ನೂ ಎರಡೂವರೆ ವರ್ಷಗಳ ಕಾಲ ಅಧಿಕಾರದಲ್ಲಿರುವ ನನ್ನನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ವಿಪಕ್ಷಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ರಾಜಕೀಯ ಬಿಡಿ:ಶಿಕ್ಷಕರು ರಾಜಕೀಯ ಪಕ್ಷ, ಜಾತಿ ಎಂಬ ಚಿಂತೆ ಮಾಡದೆ ಸಮಾಜ ನೀಡಿರುವ ದೊಡ್ಡ ಜವಾಬ್ದಾರಿಯಂತೆ ವಿದ್ಯಾರ್ಥಿಗಳಿಗೆ ದುಡಿಮೆ, ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿ ಸಮಾಜಕ್ಕೆ ಒಳ್ಳೆಯವನಾಗಿ ಬದುಕುವಂತೆ ಮಾಡಿ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.
ರಾಜಕೀಯ ಜಂಜಾಟಗಳು ನಿವಾರಣೆಯಾದ ನಂತರ ಮುಖ್ಯ ಶಿಕ್ಷಕರ ಬಡ್ತಿ, ಪ್ರತ್ಯೇಕ ವೇತನ ಶ್ರೇಣಿ, ಮೂವತ್ತು ದಿನಗಳ ಗಳಿಕೆ ರಜೆ ಸೇರಿದಂತೆ ಇನ್ನಿತರ ಬೇಡಿಕೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.