ಭ್ರಷ್ಟರ ವಿರುದ್ಧ ಲೋಕಾಯುಕ್ತ ಸಮರ ಮುಂದುವರಿಸಿದ್ದು, ರಾಜ್ಯಾದ್ಯಂತ ಮಂಗಳವಾರ ಏಕಕಾಲದಲ್ಲಿ ಬೆಂಗಳೂರು, ಚಿಕ್ಕಮಗಳೂರು, ಬೀದರ್, ಬಿಜಾಪುರ ಸೇರಿದಂತೆ ಆರು ಕಡೆ ದಾಳಿ ನಡೆಸಿ ಒಟ್ಟು 7 ಕೋಟಿ 63 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದೆ.
ಇಂದು ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ನ್ಯಾ.ಸಂತೋಷ್ ಹೆಗ್ಡೆ ನಿರ್ದೇಶನದಲ್ಲಿ ಏಕಕಾಲದಲ್ಲಿ ಭ್ರಷ್ಟ ಅಧಿಕಾರಿಗಳ ಕಚೇರಿ, ನಿವಾಸದಲ್ಲಿ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ಪತ್ರ ವಶಪಡಿಸಿಕೊಂಡರು. ಅಲ್ಲದೇ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಹೊಸಕೋಟೆ ಆಹಾರ ನಿರೀಕ್ಷಕ ತಿಮ್ಮರಾಜು ಅವರು ಪಡೆಯುತ್ತಿರುವುದು ಕೇವಲ 9 ಸಾವಿರ ಸಂಬಳ. ಆದರೆ ಬನಶಂಕರಿಯಲ್ಲಿ ಅವರು ಕಟ್ಟಿಸಿರುವ ಭವ್ಯ ಬಂಗಲೆ ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆ. ಅದೇ ರೀತಿ ನೂರ್ ಅಹ್ಮದ್ ಖಾನ್ ಅವರ ಈವರೆಗಿನ ಆದಾಯ 35 ಲಕ್ಷ ರೂಪಾಯಿ. ಖಾನ್ ಮನೆಯಲ್ಲಿ 60 ಸಾವಿರ ರೂ. ನಗದು, 120 ಗ್ರಾಂ ಚಿನ್ನ, 1ಲಕ್ಷ ರೂ.ಮೌಲ್ಯದ ಎಫ್.ಡಿ, ಸಂತೇಬೆನ್ನೂರಿನಲ್ಲಿ ಪೆಟ್ರೋಲ್ ಬಂಕ್, 30 ಎಕರೆ ಜಮೀನು ಹೊಂದಿರುವುದಾಗಿ ಲೋಕಾಯುಕ್ತ ಎಡಿಜಿಪಿ ರೂಪ್ ಕುಮಾರ್ ದತ್ತಾ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ವಿವರಿಸಿದ್ದಾರೆ. ಇನ್ನುಳಿದಂತೆ ನಾಲ್ಕು ಅಧಿಕಾರಿಗಳು ತಮ್ಮ ಆದಾಯಕ್ಕಿಂತ ಅಧಿಕ ಆಸ್ತಿ-ಪಾಸ್ತಿ ಸಂಪಾದಿಸಿರುವುದಾಗಿ ಹೇಳಿದರು.
ಭ್ರಷ್ಟ ಅಧಿಕಾರಿಗಳ ವಿವರ:
ತಿಮ್ಮರಾಜು- ಆಹಾರ ನಿರೀಕ್ಷಕ ಹೊಸಕೋಟೆ, 1.49 ಕೋಟಿ ಅಕ್ರಮ ಆಸ್ತಿ ಪತ್ತೆ.
ಮಾದ ಶೆಟ್ಟಿ-ಭೂ ಸೇನಾ ನಿಗಮದ ಜ್ಯೂ.ಇಂಜಿನಿಯರ್ ಬೀದರ್, 1.31 ಕೋಟಿ ರೂ.
ಸಿದ್ರಾಮ ಲಿಂಗಪ್ಪ-ಎಇಇ ಇಂಡಿ, 1.04 ಕೋಟಿ ರೂ.
ಶಂಕರ ಗೌಡ ಪಾಟೀಲ್-ಎಇಇ ಬಿಜಾಪುರ, 1.17 ಕೋಟಿ ರೂ.
ನೂರ್ ಅಹ್ಮದ್ ಖಾನ್-ಧಾರವಾಡ ಭೂ ಸೇನಾ ನಿಗಮದ ಸಹಾಯಕ ನಿರ್ದೇಶಕ, 1.61ಕೋಟಿ ರೂ.
ಸಿ.ಕೆ.ಪ್ರಸಾದ್, ಚಿಕ್ಕಮಗಳೂರು ಜಿ.ಪಂ.ದ್ವಿತೀಯ ದರ್ಜೆ ಸಹಾಯಕ, 67 ಲಕ್ಷ ರೂಪಾಯಿ.