ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರಕಾರವನ್ನು ಉರುಳಿಸಲು ಸ್ವತ: ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಪ್ರಯತ್ನ ನಡೆಸಿರುವ ಆಘಾತಕಾರಿ ಸಂಚೊಂದು ಬಯಲುಗೊಂಡಿದ್ದು, ರಾಜ್ಯ ಬಿಜೆಪಿ ರಾಜಕೀಯದಲ್ಲಿ ಬಿರುಗಾಳಿಯ ಅಲೆಯನ್ನೆಬ್ಬಿಸಿದೆ.
ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಮತ್ತು ಅದಿರು ರಫ್ತು ನಿಷೇಧಿಸಿ ತಮ್ಮ ಉದ್ಯಮದ ಹೊಡೆತಕ್ಕೆ ಕಾರಣರಾಗಿರುವ ಯಡಿಯೂರಪ್ಪರನ್ನು ಅಧಿಕಾರದಿಂದ ವಜಾ ಮಾಡುವ ನಿಟ್ಟಿನಲ್ಲಿ ಸಚಿವ ಜನಾರ್ದನ ರೆಡ್ಡಿ ಅವರು ರಾಜ್ಯಪಾಲರ ನಿಕಟವರ್ತಿ ಹಾಗೂ ಕೇಂದ್ರ ಕಾನೂನು ಸಲಹೆಗಾರ ಎಂದು ಹೇಳಿಕೊಳ್ಳುವ ಅಶೋಕ್ ಶರ್ಮಾ ಎಂಬವರ ಜತೆ 'ಡೀಲ್' ಮಾಡುವ ವಿಡಿಯೋ ದೃಶ್ಯಗಳನ್ನು ಹೊಂದಿರುವ ಸಿಡಿಯನ್ನು ಖಾಸಗಿ ಸುದ್ದಿ ವಾಹಿನಿಯೊಂದು ಬಿಡುಗಡೆ ಮಾಡಿರುವುದು ಭಾರಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ.
ಸಮಾರು 40 ನಿಮಿಷಗಳ ಕಾಲ ನಡೆಯುವ ಈ ಸಂಭಾಷಣೆಯಲ್ಲಿ ಯಡ್ಡಿ ಸರಕಾರವನ್ನು ಉರುಳಿಸಲು ಭಾರಿ ಷಡ್ಯಂತ್ರವನ್ನೇ ರಚಿಸಲಾಗಿದೆ. ಸರಕಾರವನ್ನು ಪತನ ಮಾಡಲು ಕೇಂದ್ರ ಸರಕಾರದ ಜತೆ ಮಾತನಾಡಬೇಕು, ಲಾಭ ದಾಯಕ ಹುದ್ದೆ ಪ್ರಕರಣದಲ್ಲಿ ತನ್ನನ್ನು ಪಾರು ಮಾಡಬೇಕೆಂದು ಜನಾರ್ದರಿ ರೆಡ್ಡಿ ಅವರು ಅಶೋಕ್ ಜತೆ ಮನವಿ ಮಾಡುತ್ತಿದ್ದಾರೆ.
ಈ ವಿಷಯದಲ್ಲಿ ಯಾವುದೇ ಚೌಕಾಶಿ ಮಾಡುವುದಿಲ್ಲ. ನೀವು ಕೇಳಿದ ದುಡ್ಡನ್ನು ನೀಡುತ್ತೇವೆ. ಹೀಗೆ ಮಾಡಿದಲ್ಲಿ ತಮಗೆ 5 ಕೋಟಿ ಹಾಗೂ ಕೆಲಸ ಮಾಡಿದವರಿಗೆ 15 ಕೋಟಿ ರೂಪಾಯಿ ನೀಡುವುದಾಗಿ ರೆಡ್ಡಿ 'ಆಫರ್' ಮಾಡುವ ದೃಶ್ಯಗಳನ್ನು ಚಾನೆಲ್ ಬಿಡುಗಡೆ ಮಾಡಿದೆ.
ಕಳೆದ ಆಗಸ್ಟ್ನಲ್ಲಿ ಈ ಸಂಚು ರೂಪುಗೊಂಡಿದೆ. ಯಡ್ಡಿ ಅವರಿಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದ್ದೇವೆ. ಆದರೆ ಅವರಿಂದ ಯಾವುದೇ ನೆರವು ದೊರಕುತ್ತಿಲ್ಲ. ಹೀಗಾಗಿ ಸರಕಾರವನ್ನು ವಜಾಗೊಳಿಸಬೇಕಾಗಿದೆ ಎಂದು ರೆಡ್ಡಿ ಬೇಡಿಕೆ ಇರಿಸುತ್ತಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಬಿಜೆಪಿನಲ್ಲಿ ಭುಗಿಲೆದ್ದಿರುವ ಭಿನ್ನಮತವು ಇದೀಗ ಮತ್ತಷ್ಟು ತೀವ್ರ ಸ್ವರೂಪಕ್ಕೆ ತಲುಪಿದ್ದು, ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನವನ್ನೇ ಮೂಡಿಸುವ ಸಾಧ್ಯತೆಯಿದೆ.