ಭಾರತೀಯ ಜನತಾ ಪಕ್ಷಕ್ಕೆ ಕಾನೂನು, ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ ಎಂದು ವಾಗ್ದಾಳಿ ನಡೆಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಹಣ ವಸೂಲಿಗಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಗಳವಾರ ರಾಜ್ಯಕ್ಕೆ ನಿತಿನ್ ಗಡ್ಕರಿ ಅವರು ಭೇಟಿ ನೀಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯದು ಹೈಕಮಾಂಡ್ ಅಲ್ಲ, ಲೋ ಕಮಾಂಡ್ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮೀಸಲು ವಿವಾದ ಗೊಂದಲ ಬಗೆಹರಿಯುವ ತನಕ ಚುನಾವಣೆ ನಡೆಸುವುದು ಸರಿಯಲ್ಲ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯವ್ಯಕ್ತಪಡಿಸಿದರು.
ನಿತಿನ್ ಗಡ್ಕರಿ ರಾಜ್ಯಕ್ಕೆ ಬಂದರೆ ಏನೂ ಪ್ರಯೋಜನವಿಲ್ಲ, ಅವರು ಭೂ ಹಗರಣಗಳಿಗೆ ಅಧಿಕೃತ ಮುದ್ರೆ ಒತ್ತುತ್ತಾರೆ ಅಷ್ಟೇ. ಇಲ್ಲಿ ಬಿಜೆಪಿಯವರು ಯಾವ ರೀತಿ ಹಣ ಹೊಡೆಯುತ್ತಿದ್ದಾರೆ. ನಮಗೂ ಎಷ್ಟು ಪಾಲು ಸಿಗುತ್ತದೆ ಎಂಬುದನ್ನು ನೋಡಲು ಬರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಅಕ್ರಮ ಗಣಿಗಾರಿಕೆ, ಭೂ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಲೋಕಾಯುಕ್ತರೇ ಸಮರ್ಥರು ಎಂದಿದ್ದ ಬಿಜೆಪಿ ಇದೀಗ ಭೂ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೂ ಒಪ್ಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.