ಭೂಹಗರಣ-ದಿಢೀರ್ ರಾಜೀನಾಮೆ ಕೊಟ್ಟಿದ್ದಕ್ಕೆ ಕ್ಷಮಿಸಿ; ನಾಯ್ಡು
ಬೆಂಗಳೂರು, ಸೋಮವಾರ, 6 ಡಿಸೆಂಬರ್ 2010( 18:24 IST )
NRB
'ಬೆಂಬಲಿಗರ ಅನುಮತಿ ಇಲ್ಲದೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಕ್ಕೆ ನನ್ನ ಕ್ಷಮಿಸಿ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ' ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೋಮವಾರ ವೈಷ್ಣೋದೇವಿ ದರ್ಶನ ಪಡೆದು ಬೆಂಗಳೂರಿಗೆ ವಾಪಸ್ ಆದ ನಂತರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತ ಈ ರೀತಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಐಎಡಿಬಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಐಟಿ-ಬಿಟಿ ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಡಿ.3ರಂದು ಎಫ್ಐಆರ್ ದಾಖಲಿಸಿದ್ದರು. ಏತನ್ಮಧ್ಯೆಯೇ ಕಟ್ಟಾ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದರು.
ಇಂದು ನಗರಕ್ಕೆ ವಾಪಸ್ಸಾದ ಅವರು ಸದಾಶಿವನಗರದಲ್ಲಿ ಇರುವ ನಿವಾಸದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತ, ಸರಕಾರ ಹಾಗೂ ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ದೃಷ್ಟಿಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಅಷ್ಟೇ ಅಲ್ಲ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಾವುದೇ ಸಂಸ್ಥೆ ತನಿಖೆಗೆ ಬಂದರು ಕೂಡ ಸೂಕ್ತ ರೀತಿಯಲ್ಲಿ ಸಹಕಾರ ನೀಡಲು ತಾನು ಸಿದ್ದ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ನೀವೆಲ್ಲಾ ನನ್ನ ಮೇಲೆ ಇಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ತಾನು ಋಣಿ ಎಂದ ನಾಯ್ಡು, ಸಚಿವ ಪದವಿ ಹೋದರೂ ಕೂಡ ನಿಮ್ಮೆಲ್ಲರ ಬೆಂಬಲದೊಂದಿಗೆ ಜಿ.ಪಂ, ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿಯುವುದಾಗಿಯೂ ಹೇಳಿದರು. ಆದರೆ ತಾನು ಅಪರಾಧಿ ಅಲ್ಲ, ಪಲಾಯನ ಮಾಡುವ ಜಾಯಮಾನದವನು ಅಲ್ಲ. ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದೆ. ಹಾಗಾಗಿ ನನಗೆ ಬಂಧನ ಭೀತಿ ಇಲ್ಲ ಎಂದರು.
ಆದರೂ ತಾನು ಆರೋಪ ಬಂದ ಹಿನ್ನೆಲೆಯಲ್ಲಿ ತುರ್ತಾಗಿ ರಾಜೀನಾಮೆ ನೀಡಿದ್ದೆ, ಈ ಬಗ್ಗೆ ನನ್ನ ಬೆಂಬಲಿಗರಲ್ಲಿ ಕ್ಷಮೆಯಾಚಿಸುತ್ತೇನೆ ಎಂದರು. ನನ್ನ ವಿರೋಧಿಗಳು ಪಿತೂರಿ ನಡೆಸುತ್ತಿದ್ದು, ಸತ್ಯಕ್ಕೆ ದೂರವಾದ ವಿಚಾರವನ್ನು ಜನರಿಗೆ ತಿಳಿಸುತ್ತಿದ್ದಾರೆ. ದಯವಿಟ್ಟು ಮಾಧ್ಯಮಗಳು ಕೂಡ ಇಂತಹ ಅಪಪ್ರಚಾರದ ಸುದ್ದಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಬೇಡ ಎಂದು ಮನವಿ ಮಾಡಿಕೊಂಡರು.