ಚಿತ್ರದುರ್ಗ, ಗುರುವಾರ, 23 ಡಿಸೆಂಬರ್ 2010( 19:32 IST )
ಮತ ಮಾರಾಟ ಮಾಡುವುದರಿಂದ ಬಡವರು, ರೈತರು, ರಾಜ್ಯದ ಅಭಿವೃದ್ಧಿ ಕುಂಠಿತವಾಗಿ ಶ್ರೀಮಂತರು ಮತ್ತಷ್ಟು ದೊಡ್ಡವರಾಗುತ್ತಾರೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.
ನಗರದ ಪತ್ರಕರ್ತರ ಸಾಂಸ್ಕೃತಿಕ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತದಾರರು ಹಣಕ್ಕೆ ಮತ ಮಾರಿಕೊಂಡರೆ ಅಭಿವೃದ್ದಿ ಮರೀಚಿಕೆಯಾಗುತ್ತದೆ. ಹೀಗಾಗಿ ಅಭಿವೃದ್ಧಿ ಕೆಲಸ ಮಾಡುವ ಬಿಎಸ್ಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.
ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರ, ಗಣಿ ಲೂಟಿ, ಭೂ ಹಗರಣದಲ್ಲಿ ಮುಳುಗಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ದರ ಹೆಚ್ಚಳದ ಪರಿಣಾಮ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಕ್ಕೆ ಜನ ಪಾಠ ಕಲಿಸಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಒಳ್ಳೆಯ ರಸ್ತೆ, ಚರಂಡಿ, ಶೌಚಾಲಯ, ಶಾಲೆ ಮೊದಲಾದ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಆಡಳಿತ ನಡೆಸಿದ ಪಕ್ಷಗಳು ವಿಫಲವಾಗಿವೆ. ಹೀಗಿರುವಾಗ ಈಗ ಮತ್ತೆ ಜನರ ಬಳಿ ವೋಟ್ ಕೇಳಲು ಬಂದಿದ್ದಾರೆ. ವೋಟ್ ಕೇಳಲು ಇವರಿಗೆ ನೈತಿಕ ಹಕ್ಕಿಲ್ಲ. ಬಡವರು, ರೈತರು, ದಲಿತರನ್ನು ನಿರ್ಲಕ್ಷಿಸಿರುವ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕು ಎಂದರು.
ಜಿಲ್ಲೆಯ 9 ಜಿ.ಪಂ., 22 ತಾ.ಪಂ. ಕ್ಷೇತ್ರಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಇತರ ಪಕ್ಷಗಳಂತೆ ಈ ಚುನಾವಣೆಗೆ ನಾವು ಪ್ರಣಾಳಿಕೆ ಬಿಡುಗಡೆ ಅಥವಾ ಆಶ್ವಾಸನೆ ಕೊಡುವುದಿಲ್ಲ. ಪಕ್ಷ ಗೆದ್ದರೆ ಜನರ ಸಮಸ್ಯೆಗಳು ಏನೆಂದು ತಿಳಿದುಕೊಂಡು ಪರಿಹಾರ ರೂಪಿಸಲಿದ್ದೇವೆ. ಚುನಾವಣೆಯಲ್ಲಿ ಬಿಎಸ್ಪಿ ರಾಜ್ಯದ ಶೇ.35ರಷ್ಟು ಸ್ಥಾನಗಳಲ್ಲಿ ಸ್ಪರ್ಧೆ ಒಡ್ಡಲಿದೆ. 30 ಕಡೆ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.