ಆಡಳಿತಾರೂಢ ಬಿಜೆಪಿಯ ಭ್ರಷ್ಟಾಚಾರದ ಕುರಿತ ಪುಸ್ತಕವನ್ನು ಜೆಡಿಎಸ್ ಪ್ರಕಟಿಸಿದ ಬೆನ್ನಲ್ಲೇ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬದ ಸದಸ್ಯರ ಅವ್ಯವಹಾರಗಳ ಸಮಗ್ರ ಮಾಹಿತಿ ಒಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇವೇಗೌಡರು ಪ್ರಧಾನಿಯಾಗಿದ್ದಾಗ ಹಾಗೂ ಅವರ ಪುತ್ರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಹಗರಣಗಳ ವಿವರ ಈ ಪುಸ್ತಕದಲ್ಲಿರಲಿವೆ ಎಂದು ವಿವರಿಸಿದರು.
ಅಪ್ಪ-ಮಕ್ಕಳು ತಮ್ಮ ಆಡಳಿತ ಅವಧಿಯಲ್ಲಿ ಸಾಕಷ್ಟು ಭ್ರಷ್ಟಚಾರ ಎಸಗಿದ್ದಾರೆ. ಕೆಪಿಎಸ್ಸಿ ನೇಮಕದಲ್ಲಂತೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಿತಿಮೀರಿದ ಅವ್ಯವಹಾರ ನಡೆಸಿದ್ದಾರೆ ಎಂದು ದೂರಿದರು.
ದೇವೇಗೌಡರು ಬಯಸಿದರೆ ಹಗರಣಗಳ ಪುಸ್ತಕವನ್ನು ಸಂಸತ್ ಭವನದಲ್ಲಿ ಬಿಡುಗಡೆಗೊಳಿಸಲು ಸಿದ್ದ. ದೇವೇಗೌಡರು ಹಾಗೂ ಅವರ ಕುಟುಂಬದವರು ನಡೆಸಿದ ಹಗರಣಗಳ ವರದಿಯಿಂದ ಒಂದು ಮೆಗಾ ಧಾರಾವಾಹಿಯನ್ನೇ ಮಾಡಬಹುದು ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಹತ್ತು ಜನ್ಮ ಎತ್ತಿದರೂ ಸಾಧ್ಯವಿಲ್ಲ-ಎಚ್ಡಿಕೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹತ್ತು ಜನ್ಮವೆತ್ತಿ ಬಂದರೂ, ನಮ್ಮ ಕುಟುಂಬಿಕರು ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಬಗ್ಗೆ ಜನರಲ್ಲಿ ತಪ್ಪು ಭಾವನೆ ಮೂಡಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂಲಕ ಯಡಿಯೂರಪ್ಪ ತಮ್ಮ ಪಾಪದ ಕೂಸನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜಾಹೀರಾತು ಮೂಲಕ ನಮ್ಮ ಕುರಿತು ಸತ್ತುಹೋದ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ನಮ್ಮ ಕುಟುಂಬದ 15 ಮಂದಿಯ ಹೆಸರಿನಲ್ಲಿ 2005ರಿಂದ ಯಾವುದೆಲ್ಲ ಆಸ್ತಿ ರಿಜಿಸ್ಟರ್ ಆಗಿದೆ ಎಂಬ ಬಗ್ಗೆ ಇಲಾಖೆಗಳಿಂದ ಮಾಹಿತಿ ತರಿಸಿಕೊಳ್ಳುತ್ತಿದ್ದಾರೆ. ಈ ಪಟ್ಟಿಯಲ್ಲಿ ಸತ್ತು ಹಲವು ವರ್ಷಗಳಾದ ಮಂದಿಯ ಹೆಸರೂ ಇದೆ. ಸಾಧ್ಯವಿದ್ದರೆ, ನಮ್ಮ ಕುಟುಂಬ ಅಕ್ರಮ ಎಸಗಿದೆ ಎಂಬುದನ್ನು ಬಿಜೆಪಿ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.