ಕೇಂದ್ರ ಸರಕಾರ ಪ್ರಕಟಿಸಿರುವ ಪಠ್ಯ ಪುಸ್ತಕಗಳಲ್ಲಿ ಸ್ವಾತಂತ್ರ್ಯ ವೀರರಾದ ಭಗತ್ ಸಿಂಗ್, ಸುಖದೇವ್, ರಾಜ್ಗುರು ಸೇರಿದಂತೆ ಮತ್ತಿರರನ್ನು ಭಯೋತ್ಪಾದಕರು ಎಂದು ಬಿಂಬಿಸಿದೆ. ರಾಷ್ಟ್ರಭಕ್ತರನ್ನು ಭಯೋತ್ಪಾದಕರಂದೂ, ಭಯೋತ್ಪಾದಕರನ್ನು ರಾಷ್ಟ್ರಭಕ್ತರೆಂದೂ ವಿವರಿಸುವ ಹುನ್ನಾರ ನಡೆಯುತ್ತಿದೆ ಎಂದು ರಾಜ್ಯಸಭಾ ಸದಸ್ಯ, ನ್ಯಾಯಮೂರ್ತಿ ಎಂ.ರಾಮಾಜೋಯಿಸ್ ಆರೋಪಿಸಿದ್ದಾರೆ.
ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಸಂಘಟನೆಯ 56ನೇ ರಾಷ್ಟ್ರೀಯ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಶಿಕ್ಷಣ ಪಡೆದಿದ್ದೇವೆ ಸತ್ಯ. ಆದರೆ ಎಂಥ ಶಿಕ್ಷಣ ಎನ್ನುವುದು ಪ್ರಶ್ನಾರ್ಹವಾಗಿದೆ. ಯುವಕರಲ್ಲಿ ದೇಶಭಕ್ತಿ ಮೂಡಿಸುವ ಶಿಕ್ಷಣ ಇಲ್ಲವೇ ಇಲ್ಲ ಎಂದು ವಿಷಾದಿಸಿದರು.
ಭಾರತ ಜಗತ್ತಿನ ಅತ್ಯುನ್ನತ ತತ್ವಶಾಸ್ತ್ರವನ್ನು ಹೊಂದಿದ ರಾಷ್ಟ್ರ. ಶ್ಲೋಕಗಳು, ಉಪನಿಷತ್ತುಗಳು ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳುವ ಬಗ್ಗೆ ತಿಳಿಸಿವೆ. ಸ್ವಾಮಿ ವಿವೇಕಾನಂದ ಮಾದರಿಯ ಶಿಕ್ಷಣ ನಮಗೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.