ಚುನಾವಣೆ-ರಾಜ್ಯದ ಅಭಿವೃದ್ಧಿಗೆ ಜನರ ಮೌಲ್ಯಮಾಪನ: ಕಾಂಗ್ರೆಸ್
ಮಂಗಳೂರು, ಸೋಮವಾರ, 27 ಡಿಸೆಂಬರ್ 2010( 15:55 IST )
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ರಾಜ್ಯದ ಅಭಿವೃದ್ಧಿಯ ಅಳತೆಗೋಲು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಭಿಪ್ರಾಯವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇಂಧನ ಸಚಿವೆ ಶೋಭಾ ಕರಂದಾಜ್ಲೆ ಈ ಚುನಾವಣೆ ಜನಾದೇಶವಲ್ಲ ಎಂದಿದ್ದಾರೆ. ಇದು ಸತ್ಯಕ್ಕೆ ದೂರವಾದ ಹೇಳಿಕೆ. ನಮ್ಮ ಪ್ರಕಾರ ಇದು ರಾಜ್ಯದ ಅಭಿವೃದ್ಧಿಗೆ ಜನರು ಮಾಡುವ ಮೌಲ್ಯಮಾಪನ ಎಂದರು.
ಮೂರು ತಿಂಗಳಲ್ಲಿ ಯಡಿಯೂರಪ್ಪ ಸರಕಾರ ಬೀಳಲಿದೆ. ಒಂದೆರಡು ತಿಂಗಳು ಹೆಚ್ಚುಕಮ್ಮಿಯಾಗಬಹುದು. ಸರಕಾರ ಬೀಳಿಸಲು ಒಂದೆಡೆ ಜನರೇ ತೀರ್ಮಾನಿಸಿದ್ದಾರೆ. ಇನ್ನೊಂದೆಡೆ ಕಾನೂನಿನ ಚೌಕಟ್ಟಿನಡಿ ಸರಕಾರ ಕೆಳಗೆ ಇಳಿಯಬೇಕಾಗುತ್ತದೆ. ಸರಕಾರದ ಹಗರಣ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಇದರ ವರದಿ ಬರುವಾಗ ಹಲವು ಸಚಿವರು ರಾಜೀನಾಮೆ ಕೊಡಬೇಕಾಗುತ್ತದೆ. ನನ್ನದು ರಾಜಕೀಯ ಹೇಳಿಕೆಯಲ್ಲ, ಇದು ವಾಸ್ತವ ಎಂದರು.
ರಾಜ್ಯದ ಹೆಚ್ಚಿನ ಕಡೆ ಯುವಜನತೆ ಕಾಂಗ್ರೆಸ್ನಲ್ಲಿ ತೊಡಗಿಕೊಂಡಿದ್ದು, ಯುವಕರು, ಸುಶಿಕ್ಷಿತರಿಗೆ ಟಿಕೆಟ್ ನೀಡಲಾಗಿದೆ. ಇದನ್ನು ಗಮನಿಸುವಾಗ ಕಾಂಗ್ರೆಸ್ ಪಕ್ಷ ಗೆಲ್ಲುವ ಆತ್ಮವಿಶ್ವಾಸ ಇದೆ ಎಂದು ಹೇಳಿದರು.
ಐದು ವರ್ಷ ಆಡಳಿತ ನಡೆಸುತ್ತೇನೆ ಎನ್ನುತ್ತಿದ್ದ ಸಿಎಂ, ಇದೀಗ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ ಎನ್ನುತ್ತಿದ್ದಾರೆ. ಇದು ಸರಕಾರ ಬೀಳುವ ಮುನ್ಸೂಚನೆ. ಜಿ.ಪಂ., ತಾ.ಪಂ. ಚುನಾವಣೆ ಗೆಲ್ಲಲು ಬಿಜೆಪಿ ಹಣದ ಹೊಳೆ ಹರಿಸುತ್ತಿದೆ. ಆಂಬ್ಯುಲೆನ್ಸ್ಗಳಲ್ಲಿ ಸಾವಿರ ಮುಖಬೆಲೆಯ ನೋಟುಗಳು ಸಾಗಾಟವಾಗುತ್ತಿವೆ. ಹಿಂದೆ ಆಪರೇಷನ್ ಕಮಲ ಮಾಡಿದಂತೆ ಈಗ ಬೇರೆ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆಯಲು 50 ಲಕ್ಷ ರೂ. ನೀಡುವ ಮೂಲಕ 'ಆಪರೇಷನ್ ವಿಡ್ರಾವಲ್' ಮಾಡುತ್ತಿದೆ ಎಂದು ಪರಮೇಶ್ವರ್ ಆರೋಪಿಸಿದರು.