ಆರೋಪ ಸಾಬೀತಾದ್ರೆ ಮಾತ್ರ ರೆಡ್ಡಿ ಬ್ರದರ್ಸ್ಗೆ ಕೊಕ್: ಈಶ್ವರಪ್ಪ
ಶಿವಮೊಗ್ಗ, ಸೋಮವಾರ, 3 ಜನವರಿ 2011( 11:37 IST )
ಬಳ್ಳಾರಿಯ ರೆಡ್ಡಿ ಬ್ರದರ್ಸ್ ವಿರುದ್ಧದ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮೇಲಿನ ಆರೋಪ ಸಾಬೀತಾದ್ರೆ ಸಂಪುಟದಿಂದ ಕೈಬಿಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆರಿಗೆ ವಂಚನೆ ಆರೋಪ ಬಂದ ಕೂಡಲೇ ಸಂಪುಟದಿಂದ ಕೈಬಿಡಲು ಸಾಧ್ಯವಿಲ್ಲ. ಆ ಬಗ್ಗೆ ಆರೋಪ ಸಾಬೀತಾದರೆ ಅವರನ್ನು ಒಂದು ನಿಮಿಷವೂ ಸಂಪುಟದಲ್ಲಿ ಇರಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಜನವರಿ 6ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ವಿಪಕ್ಷಗಳು ಪ್ರತಿಭಟನೆ, ಗದ್ದಲ ನಡೆಸುವುದು ಬೇಡ. ವಿಪಕ್ಷಗಳು ಅಧಿವೇಶನದಲ್ಲಿ ಪಾಲ್ಗೊಂಡು, ಭೂ ಹಗರಣಗಳ ದಾಖಲೆ ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.
ಅನಾವಶ್ಯಕವಾಗಿ ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ವಿಪಕ್ಷಗಳು ಗೂಬೆ ಕೂರಿಸುವ ಕೆಲಸ ಮಾಡಿವೆ. ಪತ್ರಿಕೆಗಳಲ್ಲಿ ಹಗರಣಗಳನ್ನು ಹೈಲೈಟ್ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿವೆ. ಆದರೆ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಅದು ಪ್ರಮುಖ ವಿಷಯ ಆಗಲೇ ಇಲ್ಲ. ಹಾಗಾಗಿ ಬಿಜೆಪಿ ಭರ್ಜರಿ ಜಯಭೇರಿ ಗಳಿಸಲಿದೆ ಎಂದು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಕಂದಾಯ ಸಚಿವ ಕರುಣಾಕರ ರೆಡ್ಡಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಒಡೆತನ ಹೊಂದಿರುವ ಓಬಳಾಪುರಂ ಮೈನಿಂಗ್ ಕಂಪನಿ ಸುಮಾರು 87 ಕೋಟಿ ರೂಪಾಯಿ ತೆರಿಗೆ ವಂಚಿಸಿರುವುದಾಗಿ ಕೇಂದ್ರದ ಆದಾಯ ತೆರಿಗೆ ಇಲಾಖೆ ತನ್ನ ಮಧ್ಯಂತರ ವರದಿಯಲ್ಲಿ ತಿಳಿಸಿತ್ತು. ಆ ಬಗ್ಗೆ ರೆಡ್ಡಿ ಬ್ರದರ್ಸ್ಗೆ ನೋಟಿಸ್ ಅನ್ನು ಕೂಡ ಜಾರಿ ಮಾಡಿದೆ.
ಈ ಹಿನ್ನೆಲೆಯಲ್ಲಿ ರೆಡ್ಡಿ ಸಹೋದರರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಆಗ್ರಹಿಸಿವೆ. ಏತನ್ಮಧ್ಯೆ ಬಿಜೆಪಿ ಹೈಕಮಾಂಡ್ ಸೇರಿದಂತೆ ರಾಜ್ಯ ಮುಖಂಡರು, ಆದಾಯ ತೆರಿಗೆ ಇಲಾಖೆ ವರದಿ ನೀಡಿದ ಕೂಡಲೇ ತಪ್ಪಿತಸ್ಥರು ಎಂದು ಹೇಳಲಾಗುವುದಿಲ್ಲ. ಆರೋಪ ಸಾಬೀತಾದ್ರೆ ರೆಡ್ಡಿ ಸಹೋದರರನ್ನು ಸಂಪುಟದಿಂದ ಕೈಬಿಡುವುದಾಗಿ ಬಿಜೆಪಿ ತಿರುಗೇಟು ನೀಡಿದೆ.