ಮತ್ತೂರು- ಹೊಸಹಳ್ಳಿ ಗ್ರಾಮಗಳು ಭಾರತೀಯ ಸಂಸ್ಕೃತಿಯ ಪ್ರತೀಕ ಇದ್ದಂತೆ. ಇಲ್ಲಿನ ಜನರು ಸದಾ ಕ್ರಿಯಾಶೀಲರಾಗಿರುವ ಮೂಲಕ ವೇದ, ಸಾಹಿತ್ಯ, ಸಂಗೀತ, ಗಮಕ ಕಲೆಗಳಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರ ಸಮೀಪದ ಮತ್ತೂರಿನಲ್ಲಿ ವಿಶ್ವ ಸಂಕೇತಿ ಸಮ್ಮೇಳನದ ಅಂಗವಾಗಿ ನಡೆದ ಸನ್ಮಾನ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಜಾತಿ ಸಮಾವೇಶಗಳು ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ ಸಂದರ್ಭ ವಿಶ್ವ ಸಂಕೇತಿ ಸಮ್ಮೇಳನ ತನ್ನದೇ ಆದ ಮಹತ್ವ ಹೊಂದಿದೆ ಎಂದರು. ಇಂದು ವಿಶ್ವದ ಬಹಳಷ್ಟು ದೇಶಗಳ ಪ್ರಾಚೀನ ಸಂಸ್ಕೃತಿ ನಾಶವಾಗಿದೆ. ಆದರೆ ಭಾರತದಲ್ಲಿ ಮಾತ್ರ ಸನಾತನ ಸಂಸ್ಕೃತಿ ಇಂದಿಗೂ ಉಳಿದುಕೊಂಡು ಬಂದಿದೆ ಎಂದರು.
2020ರ ವೇಳೆಗೆ ಭಾರತ ಜಗತ್ತಿನ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮಬೇಕು. ಅದು ಕೇವಲ ಸೈನಿಕ ಶಕ್ತಿಯಾಗಿರಬಾರದು. ಬದಲಿಗೆ ಆಧ್ಯಾತ್ಮಿಕ, ಭೌತಿಕ ಹಾಗೂ ಜ್ಞಾನ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದಬೇಕು ಎಂದು ಹೇಳಿದರು.