ಆಡಂಬರದ ವಿವಾಹ ಧಿಕ್ಕರಿಸಿ ಸರಳ ವಿವಾಹ ಸ್ವೀಕರಿಸುವಂತೆ ಸಂದೇಶ ಸಾರಿದ ಮಹಾನ್ ದಾರ್ಶನಿಕ ಕವಿ ಕುವೆಂಪು ಎಂದು ಶಾಸಕ ಕೆ.ರಾಜು ಅಭಿಪ್ರಾಯಪಟ್ಟರು.
ಅಂಕನಹಳ್ಳಿಯ ನಿಸರ್ಗ ಟ್ರಸ್ಟ್ ಹಾಗೂ ರಾಮನಗರದ ಪಟೇಲ್ ಆಂಗ್ಲ ಶಾಲೆ ವತಿಯಿಂದ ಪಟೇಲ್ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಅನಿಶ್ಚಿತತೆಯಿಂದ ಕೂಡಿರುವ ಮೌಢ್ಯದ ವಿರುದ್ಧ ನಿಂತು ವೈಚಾರಿಕತೆಯನ್ನು ಪರಿಚಯಿಸಿದ ಮಾನವತಾವಾದಿ. ಸ್ವಾರ್ಥ ಮನೋಭಾವ ತೊರೆದು ವಿಶ್ವ ಭ್ರಾತೃತ್ವ ಮತ್ತು ವಿಶ್ವ ಮಾನವತೆಯನ್ನು ರೂಢಿಸಿಕೊಳ್ಳಬೇಕಿದೆ. ಶಾಲೆ, ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸುವ ಮೂಲಕ ಮಕ್ಕಳಲ್ಲಿ ಸಮಾಜ ಮುಖಿ ಭಾವನೆಗಳನ್ನು ಬಿತ್ತುವ ಕೆಲಸ ಮಾಡಬೇಕು ಎಂದು ಹೇಳಿದರು.
ಕುವೆಂಪು ಕೇವಲ ಒಬ್ಬ ಕವಿಯಲ್ಲ. ದೊಡ್ಡ ಸಾಹಿತಿ, ವಿಮರ್ಶಕ, ನಾಟಕಕಾರ ಹಾಗೂ ಬರವಣಿಗೆಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ ಮಹಾನ್ ಚೇತನ. ಅವರು ಕೈಯಾಡಿಸದ ಸಾಹಿತ್ಯ ಪ್ರಕಾರಗಳಿಲ್ಲ. ಅವರು ರಚಿಸಿದ ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮಧುಮಗಳು ಇಂದಿಗೂ ಪ್ರಸಿದ್ಧವಾಗಿವೆ ಎಂದರು.