ನಗರದ ಮಡಿವಾಳ ಸಮೀಪದ ರೂಪೇನಾ ಅಗ್ರಹಾರ ಕೊಳಚೆ ಪ್ರದೇಶದಲ್ಲಿ ಫೆ.14ರಂದು ಆಕಸ್ಮಿಕವಾಗಿ ರಾಜಕಾಲುವೆಯ ಕೊಳಚೆ ನೀರಿಗೆ ಬಿದ್ದು ಸಾವನ್ನಪ್ಪಿದ್ದ ರಿಹಾನ್ ಪಾಷ (3) ಕೊಳೆತ ಮೃತದೇಹ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.
ರೂಪೇನಾ ಅಗ್ರಹಾರದ ಕೊಳಚೆ ಪ್ರದೇಶದ ವಾಸಿ ಸಿದ್ದಿಕ್ ಪಾಷ ಹಾಗೂ ಜಬೀಲ್ ತಾಜ್ ದಂಪತಿಗಳ ಮಗುವಾದ ರಿಹಾನ್ ಪಾಷ ಮೋರಿಗೆ ಬಿದ್ದು ನಾಪತ್ತೆಯಾಗಿದ್ದ. ಮಗುವನ್ನು ಮೋರಿ ಪಕ್ಕ ಕುಳ್ಳಿರಿಸಿಕೊಂಡು ತಾಯಿ ಊಟ ಮಾಡಿಸುತ್ತಿದ್ದಾಗ ಕುಡಿಯಲು ನೀರು ತರಲು ತಾಯಿ ಮಗುವನ್ನು ಬಿಟ್ಟು ಮನೆಯೊಳಗೆ ಹೋಗಿ ಬರುವಷ್ಟರಲ್ಲಿ ಮಗು ಮೋರಿಗೆ ಬಿದ್ದು ನಾಪತ್ತೆಯಾಗಿತ್ತು.
ಸುದ್ದಿ ತಿಳಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯವರು ಸುಮಾರು ಎರಡು ಹಗಲು ಮಗುವಿಗಾಗಿ ಅದೇ ರಾಜಕಾಲುವೆಯಲ್ಲಿ ತೀವ್ರ ಹುಡುಕಾಟ ನಡೆಸಿದರು. ಆದರೆ ಮಗುವಿನ ಮೃತದೇಹ ಸಿಗದೆ ಹುಡುಕಾಟ ನಿಲ್ಲಿಸಿದ್ದರು.
ಈ ಘಟನೆ ನಡೆದು 12 ದಿನದ ನಂತರ ಪ್ರಕರಣ ಸಂಭವಿಸಿದ ಅರ್ಧ ಕಿ.ಮೀ.ದೂರದಲ್ಲಿ ಅದೇ ರಾಜಕಾಲುವೆ ಬಳಿ ಇಂದು ಬೆಳಿಗ್ಗೆ ಮಗುವಿನ ಕೊಳೆತ ಮೃತದೇಹ ನೋಡಿದ ಸ್ಥಳೀಯರೊಬ್ಬರು ಮಡಿವಾಳ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದರು. ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಕೊಳೆತ ಮೃತದೇಹವನ್ನು ರಿಹಾನ್ ಪಾಷನ ತಂದೆ-ತಾಯಿಗಳಿಗೆ ತೋರಿಸಿದ ಮೇಲೆ ಅವರು ಶವದ ಗುರುತು ಪತ್ತೆ ಹಚ್ಚಿ, ಅದು ತಮ್ಮ ಮಗುವಿನ ಶವ ಎಂದು ಗುರುತಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.