ಆಡಳಿತಾರೂಢ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಆರೋಪಿಸುವ ಬದಲು ಪ್ರತಿಪಕ್ಷಗಳು ತಮ್ಮ ಶಾಸಕರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಿ ಎಂದು ಗೃಹ ಸಚಿವ ಆರ್.ಅಶೋಕ್ ಸಲಹೆ ನೀಡಿದ್ದಾರೆ.
ಬಿಜೆಪಿ ಸೇರುವ ಎಲ್ಲ ಶಾಸಕರು ತಮ್ಮ ಸ್ವಂತ ಬುದ್ದಿಯಿಂದ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಬಿಜೆಪಿ ಸೇರುತ್ತಾರೆ. ನಮ್ಮ ಪಕ್ಷ ಸೇರಿ ಎಂದು ಯಾರಿಗೂ ಆಹ್ವಾನ ಕೊಟ್ಟಿಲ್ಲ. ಬಿಜೆಪಿ ಬಗ್ಗೆ ದೂರುವ ಬದಲು ತಮ್ಮ ಪಕ್ಷದ ಶಾಸಕರನ್ನು ಭದ್ರವಾಗಿಟ್ಟುಕೊಳ್ಳಲಿ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿರುಗೇಟು ನೀಡಿದರು.
ಸಿದ್ದರಾಮಯ್ಯ, ಎಚ್.ಡಿ.ರೇವಣ್ಣ, ಡಾ.ಪರಮೇಶ್ವರ್ ಅವರನ್ನು ಕರೆಯುತ್ತೇವೆ. ಹಾಗೆಂದು ಅವರು ಬಿಜೆಪಿ ಸೇರುತ್ತಾರಾ? ಹಿಂದೆ ಎಸ್.ಎಂ.ಕೃಷ್ಣ ಸರಕಾರವಿದ್ದಾಗ ಏಳು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಿದರು. ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಬಿಜೆಪಿಯ ಕೆಲ ಶಾಸಕರು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದರು. ಬಿಜೆಪಿಯ 11 ಅನರ್ಹ ಶಾಸಕರ ಜತೆ ಕುಮಾರಸ್ವಾಮಿ ಗೋವಾ ರೆಸಾರ್ಟ್ನಲ್ಲಿ ಮಾತುಕತೆ ನಡೆಸಿದರು. ಹಾಗಾದರೆ ಇವೆಲ್ಲ ಯಾವ ತರಹದ ಆಪರೇಶನ್ ಎಂದು ಪ್ರಶ್ನಿಸಿದರು.
ಶಾಸಕರಿಗೆ ಅವರ ಕ್ಷೇತ್ರದ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ. ಅಧಿಕಾರದಲ್ಲಿರುವ ಪಕ್ಷದಲ್ಲಿದ್ದರೆ ಹೆಚ್ಚಿನ ಕೆಲಸ ಕಾರ್ಯಗಳು ನಡೆಯುತ್ತವೆ ಎಂದು ಬಿಜೆಪಿ ಸೇರುತ್ತಾರೆ. ಇದರಲ್ಲಿ ಬಿಜೆಪಿ ಕೈವಾಡ ಇಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.