ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರದ ಕಾವು ಏರತೊಡಗಿದ್ದು, ಮತ್ತೊಂದೆಡೆ ಆಡಳಿತ ಮತ್ತು ಪ್ರತಿಪಕ್ಷಗಳ ಮುಖಂಡರ ನಡುವಿನ ಆರೋಪ-ಪ್ರತ್ಯಾರೋಪ ಕೂಡ ಮುಂದುವರಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ಗೆ ಠೇವಣಿ ಸಿಕ್ಕದಿದ್ರೆ ತನ್ನ ತಲೆಯನ್ನು ಕತ್ತರಿಸಿ ಸಂಸದ ಅನಂತ್ ಕುಮಾರ್ ಪಾದಕ್ಕೆ ಅರ್ಪಿಸುವೆ ಎಂದು ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಘೋಷಿಸಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿನ ಉಪ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಮುಖಂಡ, ಸಂಸದ ಅನಂತ್ ಕುಮಾರ್, ಜೆಡಿಎಸ್ ಚನ್ನಪಟ್ಟಣ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಳ್ಳಲಿದೆ ಎಂಬ ಹೇಳಿಕೆಗೆ ಜಮೀರ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ಬಂಗಾರಪೇಟೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಸಚಿವ ಜಮೀರ್ ಸುದ್ದಿಗಾರರ ಜತೆ ಮಾತನಾಡುತ್ತ, ಚನ್ನಪಟ್ಟಣದಲ್ಲಿ ಜೆಡಿಎಸ್ಗೆ ಠೇವಣಿ ಸಿಗದಿದ್ರೆ, ತಾನು ತಲೆ ಕತ್ತರಿಸಿ ಅನಂತ್ ಕುಮಾರ್ ಪಾದಕ್ಕೆ ಅರ್ಪಿಸುವೆ ಎಂದರು. ಅಲ್ಲದೇ, ಒಂದು ವೇಳೆ ಜೆಡಿಎಸ್ಗೆ ಠೇವಣಿ ಸಿಕ್ಕರೆ ಅನಂತ್ ಕುಮಾರ್ ರಾಜ್ಯ ಬಿಟ್ಟು ತೆರಳುತ್ತಾರಾ? ಎಂದು ಸವಾಲು ಹಾಕಿದರು.
ಚನ್ನಪಟ್ಟಣ ಸೇರಿದಂತೆ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮತದಾರ ಜೆಡಿಎಸ್ಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಬಾರಿ ನಡೆದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಶೇ.60ಕ್ಕಿಂತ ಹೆಚ್ಚು ಬಹುಮತ ಗಳಿಸಿದರೆ ತಾನು ತನ್ನ ಅರ್ಧ ಮೀಸೆ ಬೋಳಿಸಿಕೊಂಡು ಒಂದು ದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದ ಮುಂದೆ ವಾಚ್ಮ್ಯಾನ್ ಕೆಲಸ ಮಾಡುವೆ ಎಂದು ಜಮೀರ್ ಅಹ್ಮದ್ ಸವಾಲು ಹಾಕಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.