ಕುರುಡಾಯಿತು ಪ್ರೇಮ: ಪ್ರೇಯಸಿ ಮದುವೆಗೆ ಹೋದವನ ಕಣ್ಣು ಕಿತ್ತರು
ಬೆಂಗಳೂರು, ಶುಕ್ರವಾರ, 22 ಏಪ್ರಿಲ್ 2011( 13:07 IST )
ಪ್ರೇಮ ಕುರುಡು ಎಂಬ ನಾಣ್ಣುಡಿ ಬೆಂಗಳೂರಿನ ಯುವಕನೊಬ್ಬನಿಗೆ ಅಕ್ಷರಶಃ ಸತ್ಯವಾಗಿದೆ. ತಾನು ಪ್ರೀತಿಸಿದ್ದ ಯುವತಿಯ ಮದುವೆಗೆ ಶುಭ ಹಾರೈಸಲು ಹೋಗಿ ಹಲ್ಲೆಗೊಳಗಾಗಿ ತನ್ನೆರಡೂ ಕಣ್ಣುಗಳನ್ನು ಕಳೆದುಕೊಂಡಿದ್ದು, ಭಗ್ನ ಪ್ರೇಮಿಯ ಬದುಕಿನಲ್ಲಿ ಅಂಧಕಾರ ತುಂಬಿದೆ.
ಮಂಡ್ಯದ ರಘು ಹಾಗೂ ಅನುಷಾ ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದು, ಮನೆಯವರ ವಿರೋಧವನ್ನೂ ಲೆಕ್ಕಿಸದೇ ಒಂದು ವರ್ಷದ ಹಿಂದೆ ಧರ್ಮಸ್ಥಳ ಬಳಿಯ ಉಜಿರೆಯಲ್ಲಿ ಮದುವೆಯಾಗಿದ್ದರು. ಕೆಲ ದಿನಗಳ ಕಾಲ ಅನುಷಾಳೊಂದಿಗೆ ಸಂಸಾರ ನಡೆಸಿದ ರಘುವನ್ನು ಉಪಾಯವಾಗಿ ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದ ಅನುಷಾಳ ಪೋಷಕರು "ನನಗೂ ಆಕೆಗೂ ಯಾವುದೇ ಸಂಬಂಧವಿಲ್ಲ" ಎಂದು ಆತನಿಂದ ಮುಚ್ಚಳಿಕೆ ಬರೆಸಿಕೊಂಡು ಅನುಷಾಳನ್ನು ಕರೆದೊಯ್ದಿದ್ದರು.
ಇದಾದ ನಂತರ ಕೆಲವು ತಿಂಗಳವರೆಗೆ ರಘು ಹಾಗೂ ಅನುಷಾ ನಡುವೆ ಯಾವುದೇ ಸಂಪರ್ಕ ಇರಲಿಲ್ಲ. ಈ ನಡುವೆ ಅನುಷಾಳ ಪೋಷಕರು ಬೇರೊಬ್ಬನೊಂದಿಗೆ ಆಕೆಯ ಮದುವೆ ನಿಶ್ಚಯಿಸಿದ್ದರು. ಚನ್ನಪಟ್ಟಣದಲ್ಲಿ ನಡೆಯಲಿರುವ ತನ್ನ ಮದುವೆಗೆ ಬಂದು ಶುಭ ಹಾರೈಸುವಂತೆ ಅನುಷಾ ಮಂಗಳವಾರ ಫೋನ್ ಮಾಡಿದ್ದರಿಂದ ಆಕೆಯ ಮದುವೆಗೆ ಹೋದ ರಘು ಹಾಗೂ ಆತನ ಸ್ನೇಹಿತರ ಮೇಲೆ ಹುಡುಗಿಯ ತಂದೆ ಹಾಗೂ ಸಹೋದರರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಕಣ್ಣುಗಳನ್ನು ಕಿತ್ತಿದ್ದಾರೆ ಎಂದು ರಘು ಚನ್ನಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.
ಮೂಲತಃ ಮಂಡ್ಯದ ರಘು ಬೆಂಗಳೂರಿನ ಗಿರಿನಗರದ ಫಿಟ್ನೆಸ್ ಟ್ರೈನಿಂಗ್ ಸೆಂಟರ್ನಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ರಘು ಕಣ್ಣಿಗೆ ತೀವ್ರವಾಗಿ ಗಾಯಗಳಾಗಿದ್ದು, ದೃಷ್ಟಿ ಬರುವ ಸಾಧ್ಯತೆ ಕಡಿಮೆ ಎಂದು ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಮದುವೆಗೆ ಆಗಮಿಸಿದ್ದ ರಘು ಕಾರು ಖರೀದಿಸಲು ತಂದಿದ್ದ 2.5 ಲಕ್ಷ ರೂ. ಹಾಗೂ ಎರಡು ಮೊಬೈಲ್ಗಳನ್ನು ಅನುಷಾಳ ಪೋಷಕರು ಅಪಹರಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ತಾನು ಪ್ರೀತಿಸಿದ ಹುಡುಗಿಯನ್ನು ಕಡೇ ಬಾರಿಗೆ ನೋಡಿ ಶುಭ ಹಾರೈಸಲು ಹೋದ ರಘು ಇಂದು ಪ್ರಪಂಚವನ್ನೇ ನೋಡದಂತಾಗಿದ್ದಾನೆ.