ಒಬ್ಬ ವ್ಯಕ್ತಿ ಹಲವು ಮದುವೆಯಾಗಿರುವುದು, ವಂಚಿಸಿರುವ ಘಟನೆ ಕೇಳಿದ್ದೀರಿ. ಆದರೆ ಇಲ್ಲೊಬ್ಬಳು ಹಣಕ್ಕಾಗಿ ಒಂದಲ್ಲ, ಎರಡಲ್ಲ, ಸುಮಾರು 35 ಮದುವೆಯಾಗಿ ವಂಚಿಸಿರುವ ಮಹಾ ವಂಚಕಿಯೊಬ್ಬಳು ಇದೀಗ ಧಾರವಾಡ ಪೊಲೀಸರ ಅತಿಥಿಯಾಗಿದ್ದಾಳೆ.
ಹಾವೇರಿ ತಾಲೂಕಿನ ಸವಣೂರಿನ ಗೋನಾಳ ನಿವಾಸಿ 28 ಹರೆಯದ ಸುಧಾ ಎಂಬಾಕೆಯೇ ಈ ಮಹಾವಂಚಕಿ. ಈಕೆ ಹಣದ ಆಸೆಗಾಗಿ ರಾಜಸ್ಥಾನಿ ಯುವಕರನ್ನು ಮದುವೆಯಾಗಿ ವಂಚಿಸುತ್ತಿದ್ದ ಅಂಶ ಒಂದೊಂದಾಗಿಯೇ ಬಯಲಾಗತೊಡಗಿದೆ.
ಸುಧಾ ಹುಬ್ಬಳ್ಳಿಯಲ್ಲಿ ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದಾಳೆ. ಸುಧಾ ರಾಜಸ್ಥಾನಿ ಯುವಕರನ ಬಲೆಗೆ ಹಾಕಿಕೊಂಡು ಅವರ ಜತೆ ಹಸೆಮಣೆ ಏರುತ್ತಿದ್ದಳು. ನಂತರ ಚಿನ್ನಾಭರಣ, ಹಣದ ಸಹಿತ ಪರಾರಿಯಾಗುತ್ತಿದ್ದಳು. ಅದೇ ರೀತಿ ಹತ್ತು-ಹದಿನೈದು ದಿನಗಳ ಬಳಿಕ ಮತ್ತೊಮ್ಮ ಯುವಕನ ಜತೆ ಮದುವೆಯಾಗಿ ವಂಚಿಸಿ ಪರಾರಿಯಾಗುತ್ತಿದ್ದಳಂತೆ!
ಹೀಗೆ ಸುಧಾ ಸುಮಾರು 35 ರಾಜಸ್ಥಾನಿ ಯುವಕರ ಜತೆ ಮದುವೆಯಾಗಿ ಕೋಟ್ಯಂತರ ರೂಪಾಯಿ ಹಣ, ಚಿನ್ನಾಭರಣ ವಂಚಿಸಿದ್ದಾಳೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಣಕ್ಕಾಗಿ ಯುವಕರನ್ನು ಮದುವೆಯಾಗಿ ವಂಚಿಸುತ್ತಿದ್ದ ಈ ಆಧುನಿಕ ದ್ರೌಪದಿಗೆ ಚಾಲಕಿತನ ಬಟಾಬಯಲಾಗಿದೆ. ಆ ಮಾಹಿತಿ ಪಡೆದ ಧಾರವಾಡ ಪೊಲೀಸರು ಆಕೆಯನ್ನು ಸೆರೆ ಹಿಡಿದಿದ್ದಾರೆ.
ಹಣಕ್ಕಾಗಿಯೇ ಮದುವೆಯಾಗಿ ವಂಚಿಸುತ್ತಿರುವ ಸುಧಾಳನ್ನು ಪೊಲೀಸರು ತೀವ್ರ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಆಕೆ ಎಷ್ಟು ಮಂದಿ ಜತೆ ಮದುವೆಯಾಗಿದ್ದಾಳೆ, ಎಷ್ಟು ಹಣ ವಂಚಿಸಿದ್ದಾಳೆ. ಇನ್ನೂ ಎಷ್ಟು ಮಂದಿಗೆ ಇದೇ ರೀತಿ ಮದುವೆಯಾಗುವುದಾಗಿ ವಂಚಿಸಿದ್ದಾಳೆ ಎಂಬ ಬಗ್ಗೆ ವಿವರ ಕಲೆ ಹಾಕುತ್ತಿರುವುದಾಗಿ ಹೇಳಿದ್ದಾರೆ.