ರಾಸಲೀಲೆ ಪ್ರಕರಣದ ನಿತ್ಯಾನಂದ ಸ್ವಾಮಿ ಬಿಡದಿಯ ಧ್ಯಾನಪೀಠದ ಆವರಣದಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಬಲಗೈ ಮೂಳೆ ಮುರಿದುಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಮಂಗಳವಾರ ಬೆಳಿಗ್ಗೆ ಧ್ಯಾನ ಮತ್ತು ಯೋಗ ಪೂರೈಸಿದ ಅವರು ಕುದುರೆ ಸವಾರಿ ಕಲಿಕೆಗೆ ಮುಂದಾಗಿದ್ದಾಗ ಈ ಘಟನೆ ಸಂಭವಿಸಿದೆ. ಒಮ್ಮೆಲೇ ಕುದುರೆ ವೇಗ ಹೆಚ್ಚಿದಾಗ ಕೆಳಗೆ ಬಿದ್ದಿದ್ದರು.
ಕೂಡಲೇ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಿಂದ ಬುಧವಾರ ಮರಳಲಿರುವ ಅವರು ಗುರುವಾರ ಆರಂಭವಾಗಲಿರುವ ವಿಶೇಷ ಸತ್ಸಂಗದಲ್ಲಿ ಪಾಲ್ಗೊಳ್ಳುವರು ಎಂದು ಧ್ಯಾನಪೀಠದ ಮೂಲಗಳು ತಿಳಿಸಿವೆ.
ನಿತ್ಯಾನಂದ ಸ್ವಾಮಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವಿಶೇಷ ಕೊಠಡಿಗೆ ಭಕ್ತರನ್ನು ಹೊರತುಪಡಿಸಿ ಮತ್ಯಾರಿಗೂ ಪ್ರವೇಶ ನೀಡದೆ ಭದ್ರತೆ ಕೈಗೊಳ್ಳಲಾಗಿದೆ.