ಸಿಎಂ ಸಂಧಾನಕ್ಕಾಗಿ ಕೇರಳಕ್ಕೆ ಆಹ್ವಾನಿಸಿದ್ದಾರೆ ಎಂಬ ವಿಷಯದ ಕುರಿತು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿರುವ ಆಹ್ವಾನವನ್ನು ಕುಮಾರಸ್ವಾಮಿ ಸ್ವೀಕರಿಸಿದ್ದು, ಜೂನ್ 27ರ ಬೆಳಿಗ್ಗೆ 10 ಗಂಟೆಗೆ ತಾವು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಬರುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆಂದು ಗೃಹ ಸಚಿವ ಆರ್.ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಶನಿವಾರ ಸಂಜೆ ಸಿಎಂ ಸಂದೇಶದ ಬಗ್ಗೆ ವಿವರಣೆ ನೀಡಿದ ಸಚಿವರು, ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಜೂನ್ 27ರಂದು ಬೆಳಿಗ್ಗೆ ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಬರುತ್ತಾರೆ. ಅದೇ ರೀತಿ ಕುಮಾರಸ್ವಾಮಿಯವರೂ ಕೂಡ ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಮುಖಂಡರ ವಿರುದ್ಧ ಕುಮಾರಸ್ವಾಮಿ ಕಳೆದ ಮೂರು ವರ್ಷಗಳಿಂದ ಸುಳ್ಳು ಆರೋಪಗಳನ್ನೇ ಹೊರಿಸುತ್ತ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದಾಗಿ ಆರೋಪಿಸಿದರು. ಇದೀಗ ಕುಮಾರಸ್ವಾಮಿ ಆರೋಪದ ಕುರಿತು ಮಂಜುನಾಥನ ಸನ್ನಿಧಿಯಲ್ಲಿಯೇ ಪ್ರಮಾಣ ಮಾಡುವ ಮೂಲಕ ಯಾರು ಸತ್ಯವಂತರು, ಯಾರು ಸುಳ್ಳುಗಾರರು ಎಂಬುದು ತೀರ್ಮಾನವಾಗುತ್ತದೆ ಎಂದು ಹೇಳಿದರು.
ಜೂನ್ 26ಕ್ಕೆ ನಾನು ಧರ್ಮಸ್ಥಳದಲ್ಲಿರುತ್ತೇನೆ-ಎಚ್ಡಿಕೆ ರಾಜಕೀಯ ಜಂಗೀಕುಸ್ತಿ ಇದೀಗ ಆಣೆ, ಪ್ರಮಾಣದ ಸುತ್ತ ಗಿರಕಿ ಹೊಡೆಯತೊಡಗಿದ್ದು, ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಮುಹೂರ್ತ ನಿಗದಿ ಮಾಡಿದ್ದಾರೆ. ಜೂನ್ 27ರಂದು ತಾನೂ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ದ ಎಂದು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಆ ನಿಟ್ಟಿನಲ್ಲಿ ಜೂನ್ 26ರಂದೇ ರಾತ್ರಿಯೇ ಧರ್ಮಸ್ಥಳದಲ್ಲಿ ವಾಸ್ತವ್ಯ ಹೂಡುವುದಾಗಿ ಹೇಳಿದ ಅವರು, ನನ್ನ ಜೊತೆ ಸಂಧಾನದ ಬಗ್ಗೆ ಮಾತುಕತೆ ನಡೆಸಿದವರು ಲೆಹರ್ ಸಿಂಗ್. ಹಾಗಾಗಿ ಲೆಹರ್ ಸಿಂಗ್ ಕೂಡ ಪ್ರಮಾಣ ಮಾಡಬೇಕು ಎಂದು ತಿಳಿಸಿದ್ದಾರೆ. ಅಲ್ಲದೇ ತಪ್ಪಿತಸ್ಥರಿಗೆ ಮಂಜುನಾಥನೇ ಶಿಕ್ಷೆ ಕೊಡಲಿ ಎಂದು ಈ ಸಂದರ್ಭದಲ್ಲಿ ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಆಪ್ತ ಲೆಹರ್ ಸಿಂಗ್ ಮೂಲಕ ತಮ್ಮನ್ನು ಸಂಧಾನಕ್ಕಾಗಿ ಆಹ್ವಾನಿಸಿದ್ದರು ಎಂಬ ಕುಮಾರಸ್ವಾಮಿ ಹೇಳಿಕೆಗೆ, ಯಡಿಯೂರಪ್ಪ ಮಾಧ್ಯಮಗಳ ಮೂಲಕ ಗೌರವಾನ್ವಿತ ಮಾಜಿ ಕುಮಾರಸ್ವಾಮಿಯವರಿಗೊಂದು ಬಹಿರಂಗ ಪತ್ರ ಎಂದು ಜಾಹೀರಾತು ನೀಡಿದ್ದರು. ಅದರಲ್ಲಿ ಈ ವಿಷಯದ ಕುರಿತು ಪ್ರಮಾಣ ಮಾಡಲು ಧರ್ಮಸ್ಥಳಕ್ಕೆ ಬರುವಂತೆ ಆಹ್ವಾನಿಸಿದ್ದರು. ಏತನ್ಮಧ್ಯೆ ತಾನು ಮುಖ್ಯಮಂತ್ರಿಗಳ ಆಹ್ವಾನ ಸ್ವೀಕರಿಸಿರುವುದಾಗಿ ಕುಮಾರಸ್ವಾಮಿ ಹೇಳಿದ್ದರು.