ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಂಗಳವಾರ ಆರೋಪ ಪಟ್ಟಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನಿರ್ಮಲಾ ಸೀತಾರಾಮ್ ಜೂನ್ 28 ಮತ್ತು 29ರಂದು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಜೂನ್ 28ರಂದು ನಿರ್ಮಲಾ ಸೀತಾರಾಮ್ ಮತ್ತು ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅಪ್ಪ-ಮಕ್ಕಳ ವಿರುದ್ಧದ ದಾಖಲೆಗಳ ಚಾರ್ಜ್ಶೀಟ್ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
ಕೇಂದ್ರದ ಯುಪಿಎ ಸರಕಾರದ ಭ್ರಷ್ಟಚಾರ ಮತ್ತು ಕಪ್ಪು ಹಣ ವಾಪಸ್ ತರಿಸುವಂತೆ ಒತ್ತಾಯಿಸಿ ಬಿಜೆಪಿ ಹಮ್ಮಿಕೊಂಡಿರುವ ಜನಸಂಘರ್ಷ ಅಭಿಯಾನದಲ್ಲಿ ಭಾನುವಾರ ಮಾತನಾಡಿ, ಸಿಎಂ, ರಾಜ್ಯ ಸರಕಾರದ ವಿರುದ್ಧ ವಿನಾ ಕಾರಣ ಆರೋಪ ಮಾಡುತ್ತಿರುವ ಅಪ್ಪ-ಮಕ್ಕಳ ವಿರುದ್ಧ ಟೀಕೆ ಮಾಡುವ ಅವಶ್ಯಕತೆ ಇಲ್ಲ. ಜನತಾ ಜನಾರ್ದನನೇ ಅವರನ್ನು ನೋಡಿಕೊಳ್ಳುತ್ತಾನೆ ಎಂದರು.
ಅಲ್ಲದೇ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರ ವಿರುದ್ಧದ ಚಾರ್ಜ್ಶೀಟ್ ಕೂಡ ಸಿದ್ದವಾಗುತ್ತಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದರು. ಒಂದು ಹಂತದಲ್ಲಿ ಸಹನೆ ಕಳೆದುಕೊಂಡು ಮಾತನಾಡಿದ ಯಡಿಯೂರಪ್ಪ, ನನಗೆ ಈ ಪುಡಾರಿಗಳ ಸಹಕಾರ ಬೇಕಾಗಿಲ್ಲ. ದೇವರಿದ್ದಾನೆ, ಜನರಿದ್ದಾರೆ. ಅವರ ಸಹಕಾರ ಸಾಕು ಎಂದರು. ನಿಮ್ಮ (ಪ್ರತಿಪಕ್ಷಗಳು) ಯೋಗ್ಯತೆಗೆ ಇಷ್ಟು ವರ್ಷದಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಆಗಲಿಲ್ಲ. ಗ್ರಾಮೀಣ ಅಭಿವೃದ್ಧಿ ಮರೆತು ಕುಳಿತಿದ್ದೀರಿ. ಇದನ್ನೆಲ್ಲಾ ಮಾಡಲು ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಾಗಿತ್ತು. ಈಗ ಅಭಿವೃದ್ಧಿ ಸಹಿಸದೆ ಅಡ್ಡಗಾಲು ಹಾಕುತ್ತಿದ್ದೀರಿ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದರು.