ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪಗೆ ಬಂಧನ ಭೀತಿ, ಕೋರ್ಟ್ಗೆ ಹಾಜರಾಗ್ತಾರಾ? (BJP | Yeddyurappa | Lokayukta court | Arrest | warrant | High court | Land Scam)
ಯಡಿಯೂರಪ್ಪಗೆ ಬಂಧನ ಭೀತಿ, ಕೋರ್ಟ್ಗೆ ಹಾಜರಾಗ್ತಾರಾ?
ಬೆಂಗಳೂರು, ಶುಕ್ರವಾರ, 26 ಆಗಸ್ಟ್ 2011( 19:26 IST )
PR
ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿರೀಕ್ಷಣಾ ಜಾಮೀನು ಕುರಿತ ವಾದ-ವಿವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಆಗಸ್ಟ್ 29ಕ್ಕೆ ತೀರ್ಪನ್ನು ಕಾಯ್ದಿರಿಸಿದೆ. ಏತನ್ಮಧ್ಯೆ ಯಡಿಯೂರಪ್ಪ ಲೋಕಾಯುಕ್ತ ವಿಶೇಷ ಕೋರ್ಟ್ಗೆ ಖುದ್ದಾಗಿ ಹಾಜರಾಗಬೇಕಾದ ಅನಿವಾರ್ಯತೆ ಒಂದೆಡೆಯಾದರೆ. ಮತ್ತೊಂದೆಡೆ ಬಂಧನದ ಭೀತಿಯನ್ನೂ ಎದುರಿಸುವಂತಾಗಿದೆ.
ಡಿ ನೋಟಿಫಿಕೇಷನ್ ಪ್ರಕರಣದ ಕುರಿತಂತೆ ಸುಪ್ರೀಂಕೋರ್ಟ್ ಹಿರಿಯ ವಕೀಲ ಲಲಿತ್ ಅವರು ಯಡಿಯೂರಪ್ಪ ಪರ ವಾದ ಮಂಡಿಸಿ ಜಾಮೀನು ನೀಡುವಂತೆ ಮನವಿ ಮಾಡಿಕೊಂಡರು. ಅಲ್ಲದೇ ಶನಿವಾರ ತಮ್ಮ ಕಕ್ಷಿದಾರರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದ್ದು, ಆ ನಿಟ್ಟಿನಲ್ಲಾದರೂ ಜಾಮೀನು ನೀಡುವಂತೆ ಕೋರಿದರು. ಆದರೆ ನ್ಯಾಯಪೀಠ ವಾದ-ವಿವಾದ ಪೂರ್ಣ ಆಲಿಸದೆ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಲೋಕಾಯುಕ್ತ ಕೋರ್ಟ್ ನೀಡುವ ತೀರ್ಪಿನ ಬಗ್ಗೆ ತಮಗೆ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಈ ಜಾಮೀನಿನ ಕುರಿತ ತೀರ್ಪನ್ನು ಸೋಮವಾರ ನೀಡುವುದಾಗಿ ಹೇಳಿದೆ.
ಈಗಾಗಲೇ ಎಫ್ಐಆರ್ ರದ್ದತಿ ಮತ್ತು ಖುದ್ದು ಹಾಜರಾತಿಗೆ ವಿನಾಯ್ತಿ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್ ತಿರಸ್ಕರಿಸಿದೆ. ಹಾಗಾಗಿ ಲೋಕಾಯುಕ್ತ ಕೋರ್ಟ್ ಆ.8ರಂದು ಸಮನ್ಸ್ ಜಾರಿ ಮಾಡಿರುವ ನಿಟ್ಟಿನಲ್ಲಿ ಯಡಿಯೂರಪ್ಪನವರು ನಾಳೆ ಖುದ್ದಾಗಿ ಹಾಜರಾಗಬೇಕಾಗಿದೆ.
ಒಂದು ವೇಳೆ ಯಡಿಯೂರಪ್ಪನವರು ಲೋಕಾಯುಕ್ತ ವಿಶೇಷ ಕೋರ್ಟ್ಗೆ ಗೈರು ಹಾಜರಾದರೆ ಜಾಮೀನು ರಹಿತ ವಾರಂಟ್ ಜಾರಿಯಾಗಲಿದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ. ಅಲ್ಲದೇ ಕೋರ್ಟ್ಗೆ ಹಾಜರಾಗಿ ರೆಗ್ಯುಲರ್ ಬೇಲ್ಗೆ ಅರ್ಜಿ ಸಲ್ಲಿಸಿದರೂ ಕೂಡ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯೂ ಹೆಚ್ಚಳವಾಗಿದೆ. ಕೊನೆಯ ಅವಕಾಶ ಎಂಬಂತೆ ತೀರಾ ವೈಯಕ್ತಿಕ ನೆಪವೊಡ್ಡಿ ವಕೀಲರು ತಮ್ಮ(ಯಡಿಯೂರಪ್ಪ) ಕಕ್ಷಿದಾರರ ಗೈರು ಹಾಜರಿಗೆ ಮನವಿ ಸಲ್ಲಿಸಬಹುದು ಅಷ್ಟೇ.