ಜಂತಕಲ್ ಮೈನಿಂಗ್ ಗುತ್ತಿಗೆ ನವೀಕರಣ ಮತ್ತು ವಿಶ್ವಭಾರತಿ ಸೊಸೈಟಿಗೆ ನೆರವು ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಕಟಕಟೆಯಲ್ಲಿ ಕೈಮುಗಿದು ನಿಂತ ಶಾಸಕಿ ಅನಿತಾಕುಮಾರಸ್ವಾಮಿಗೆ ಕುಳಿತುಕೊಳ್ಳಲು ಅವಕಾಶ ನಿರಾಕರಿಸಿದ ಪ್ರಸಂಗ ನಡೆಯಿತು.
ಲೋಕಾಯುಕ್ತ ವಿಶೇಷ ನ್ಯಾಯಾಲಯದ ಕಟಕಟೆಯಲ್ಲಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಸಾಮಾನ್ಯ ಆರೋಪಿಗಳಂತೆ ಕೈಮುಗಿದು ನಿಂತಿದ್ದರು.
ಆದರೆ, ಆನಿತಾ ಕುಮಾರಸ್ವಾಮಿಯವರು ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಕುಮಾರಸ್ವಾಮಿ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದರು.
ಈ ಮನವಿಯನ್ನು ಮಾನ್ಯ ಮಾಡದ ನ್ಯಾಯಾಧೀಶರು, ಕಲಾಪವನ್ನು ಮುಂದುವರಿಸುವ ಮೂಲಕ ಪರೋಕ್ಷವಾಗಿ ಆರೋಪಿಗಳು ಎದ್ದು ನಿಲ್ಲಲಿ ಎಂಬ ಸೂಚನೆಯನ್ನು ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್ ರವಾನಿಸಿದರು.
ಸುಮಾರು 25 ನಿಮಿಷಗಳ ಕಾಲ ನಡೆದ ಕಲಾಪದಲ್ಲಿ ಆರೋಪಿ ಕುಮಾರಸ್ವಾಮಿ ದಂಪತಿ ಪರ್ಯಾಯ ಮಾರ್ಗವಿಲ್ಲದೆ ನೂರಾರು ವಕೀಲರು, ಸಾರ್ವಜನಿಕರೆದುರು ನಿಲ್ಲಲೇಬೇಕಾದ ಪ್ರಸಂಗ ಎದುರಾಯಿತು.
ಕುಮಾರಸ್ವಾಮಿ ದಂಪತಿ ಖುದ್ದು ಹಾಜರಾತಿ ಹಿನ್ನೆಲೆಯಲ್ಲಿ ನ್ಯಾಯಾಲಯದ ಒಳಗೂ-ಹೊರಗೂ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕಳೆದ 10 ದಿನಗಳಲ್ಲಿ ನಗರ ಸಿಟಿ ಸಿವಿಲ್ ಕೋರ್ಟ್ಗೆ ಆರೋಪಿಯಂತೆ ಹಾಜರಾದ ಎರಡನೇ ಮಾಜಿ ಮುಖ್ಯಮಂತ್ರಿ ಇವರಾಗಿದ್ದು, ಈ ಘಟನೆ ನ್ಯಾಯಾಂಗದ ಇತಿಹಾಸದಲ್ಲಿ ಹೊಸ ದಾಖಲೆ ಮಾಡಿದೆ.