ಸುಪ್ರೀಂ ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟಿಸಲಾಗುವುದು ಎಂಬ ಬೆದರಿಕೆಯೊಡ್ಡುವ ಪತ್ರವೊಂದನ್ನು ವಕೀಲರೊಬ್ಬರು ಪಡೆದಿರುವ ಹಿನ್ನೆಲೆಯಲ್ಲಿ ನವದೆಹಲಿ ಪ್ರದೇಶದ ಸುಪ್ರೀಂ ಕೋರ್ಟ್ ಮತ್ತು ಪಾಟಿಯಾಲ ಹೌಸ್ ಜಿಲ್ಲಾ ನ್ಯಾಯಾಲಯಗಳ ಸುತ್ತುಮುತ್ತು ಭದ್ರತೆ ಹೆಚ್ಚಿಸಲಾಗಿದೆ.
ಸುಭಾಷ್ ಗುಲಾಟಿ ಎಂಬ ವಕೀಲರಿಗೆ ಬೆದರಿಕೆಯ ಪತ್ರ ಬರೆಯಲಾಗಿದ್ದು, ಗುಲಾಟಿ ಅವರು ಈ ಪತ್ರವನ್ನು ನ್ಯಾಯಾಲಯದ ಅಧಿಕಾರಿಗಳು ಮತ್ತು ದೆಹಲಿ ಪೊಲೀಸರಿಗೆ ರವಾನಿಸಿದ್ದಾರೆ. ಸುಪ್ರೀಂ ಕೋರ್ಟ್ ಮತ್ತು ಪಾಟಿಯಾಲ ನ್ಯಾಯಾಲಯಗಳಲ್ಲಿ ಮಂಗಳವಾರ ಬಾಂಬ್ ಸ್ಫೋಟ ನಡೆಸಲಾಗುವುದು ಎಂದು ಪತ್ರದಲ್ಲಿ ಹೇಳಲಾಗಿದೆ.
ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಭಾರೀ ಹುಡುಕಾಟ ನಡೆಸಿದ್ದಾರೆ ಮತ್ತು ಯಾವುದೇ ಅನಾಹುತಗಳನ್ನು ತಡೆಯಲು ಭದ್ರತಾಕ್ರಮಗಳನ್ನು ಹೆಚ್ಚಿಸಲಾಗಿದೆ.
ಇದು ಇನ್ನೊಂದು ಹುಸಿ ಬೆದರಿಕೆ ಇರಬಹುದು, ಆದರೆ ಇದನ್ನು ಹಗುರವಾಗಿ ಪರಿಗಣಿಸುವುದಿಲ್ಲ ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ದೆಹಲಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಬೆದರಿಕೆಯ ಹಿನ್ನೆಲೆಯಲ್ಲಿ ಸಮಗ್ರ ತಪಾಸಣೆಯ ಬಳಿಕವೇ ನ್ಯಾಯಾಲಯದ ಆವರಣದೊಳಕ್ಕೆ ಬಿಡಲಾಗುತ್ತಿದೆ ಮತ್ತು ಭದ್ರತಾ ತಪಾಸಣೆಗೆ ಸಹಕರಿಸುವಂತೆ ವಕೀಲರನ್ನು ವಿನಂತಿಸಲಾಗಿದೆ.
ಬೆಂಗಳೂರು ಹಾಗೂ ಅಹಮದಾಬಾದ್ ಬಾಂಬ್ ಸ್ಫೋಟಗಳ ಬಳಿಕ ದೆಹಲಿ ಪೊಲೀಸರು ಕನಿಷ್ಠ ಹತ್ತು ಹುಸಿ ಕರೆಗಳನ್ನು ಪಡೆದಿದ್ದಾರೆ.
|