ಮಾಲೆಗಾಂವ್ ಸ್ಫೋಟದ ಆಪಾದಿತ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಅವರನ್ನು ನಾಸಿಕ್ ನ್ಯಾಯಾಲಯದಲ್ಲಿ ಮುಂಬೈ ಎಟಿಎಸ್ ಹಾಜರು ಪಡಿಸಿದ್ದು, ನ್ಯಾಯಾಲಯವು ನವೆಂಬರ್ 29ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.
ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಮಂಗಳವಾರ ಮುಂಜಾನೆ ಎಂಟು ಗಂಟೆಯ ವೇಳೆ ಅವರನ್ನು ಕೇಂದ್ರ ಮುಂಬೈಯಲ್ಲಿರುವ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಕರೆದೊಯ್ಯಲಾಗಿತ್ತು.
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಪುರೋಹಿತ್ರನ್ನು ನವೆಂಬರ್ 5ರಂದು ಬಂಧಿಸಲಾಗಿತ್ತು.
ಏತನ್ಮಧ್ಯೆ, ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪುರೋಹಿತ್ ವಶವನ್ನು ಪೂನಾ ಎಟಿಎಸ್ ವಿನಂತಿಸಿದ್ದು, ಇದಕ್ಕೆ ನ್ಯಾಯಾಲಯ ಅನುಮತಿ ನೀಡಿದೆ.
ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ, ಪುರೋಹಿತ್ ಸೇರಿದಂತೆ 10 ಮಂದಿಯನ್ನು ಎಟಿಎಸ್ ಬಂಧಿಸಿದೆ. ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಮೇಜರ್(ನಿವೃತ್ತ) ರಮೇಶ್ ಉಪಾಧ್ಯಾಯ, ಸ್ವಾಮಿ ಅಮೃತಾನಂದ, ಸಮೀರ್ ಕುಲಕರ್ಣಿ, ಜಗದೀಶ್ ಮಾತ್ರೆ, ರಾಕೇಶ್ ದಾವಡೆ, ಅಜಯ್ ರಾಹ್ರಿಕರ್, ಶಾಮ್ಲಾಲ್ ಭಾವರ್ ಸಾಹು ಮತ್ತು ಶಿವನಾರಾಯಣ್ ಸಿಂಗ್ ಬಂಧಿತ ಇತರರು. |