ನಾಗಾಲ್ಯಾಂಡ್ ಗಡಿಯಲ್ಲಿ ಬುಧವಾರ ಉಲ್ಪಾ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಹಾವೇರಿ ಜಿಲ್ಲೆಯ ಹಿರೇಕೆರೂರಿನ ಯೋಧ ಜಾವೀದ್ ಖಾನ್ ದೌಲತ್ ಸಾಬ್ ಬಳಿಗಾರ ಬಲಿಯಾಗಿದ್ದಾನೆ.
ಜಾವೀದ್ಖಾನ್ ದೌಲತ್ ಸಾಬ್ (23) ಬುಧವಾರ ನಾಗಾಲ್ಯಾಂಡ್ ಸೇನಾ ಕಾರ್ಯಾಲಯದಿಂದ ಗಡಿ ರಕ್ಷಣೆ ಕರ್ತವ್ಯಕ್ಕಾಗಿ 12 ಜನರ ಜತೆ ಮಿಲಿಟರಿ ವಾಹನದಲ್ಲಿ ಹೋಗುತ್ತಿರುವಾಗ ಉಲ್ಪಾ ಉಗ್ರರು ಗುಂಡಿನ ಮಳೆ ಸುರಿಸಿದರು.
ಈ ದಾಳಿಯಲ್ಲಿ ಜಾವೀದ್ ಸೇರಿದಂತೆ ಐವರು ಮೃತರಾಗಿದ್ದಾರೆ. ಜಾವೀದ್ಖಾನ್ ಪಿಯುಸಿ ಬಳಿಕ 2002ನೇ ನವೆಂಬರ್ನಲ್ಲಿ ಸೈನ್ಯ ಸೇರಿದ್ದರು.
ಮೂರು ವರ್ಷ ಜಮ್ಮು, ಕಾಶ್ಮೀರದಲ್ಲಿ ಹಾಗೂ 2 ವರ್ಷ ಮಣಿಪುರದಲ್ಲಿ ಸೇವೆ ಸಲ್ಲಿಸಿದ್ದಾರೆ. ಕಳೆದ ತಿಂಗಳು 12ರಂದು ಊರಿಗೆ ಬಂದಿದ್ದ ಇವರು, ಸೆ. 27ರಂದು ಸೇನಾ ಕರ್ತವ್ಯಕ್ಕೆ ವಾಪಸಾಗಿದ್ದರು.
ಮಣಿಪುರ ತಲುಪಿದ ಬಳಿಕ ಹಿರಿಯ ಅಧಿಕಾರಿಗಳ ಸೂಚನೆಯಂತೆ ನಾಗಾಲ್ಯಾಂಡ್ ಸೇನಾ ಕಾರ್ಯಾಲಯಕ್ಕೆ ತೆರಳಿ ಕರ್ತವ್ಯಕ್ಕೆ ಹಾಜರಾದರು. ಶುಕ್ರವಾರ ಅವರ ಪಾರ್ಥಿವ ಶರೀರ ಇಲ್ಲಿಗೆ ಬರುವ ನೀರೀಕ್ಷೆ ಇದೆ.
|