ಹೊಗೇನಕಲ್ ಯೋಜನೆ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬೆನ್ನು ಮುರಿದರೂ ಯೋಜನೆ ಮಾಡಿಯೇ ಸಿದ್ದ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಹೇಳಿಕೆಯನ್ನು ರಾಜ್ಯ ರಾಜಕೀಯ ಪಕ್ಷಗಳು ಖಂಡಿಸಿದ್ದು, ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಇಂದು ಕೂಡ ಮುಂದುವರೆದಿದೆ.
ಕನ್ನಡ ಗಡಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ವಾಟಾಳ್, ತಮಿಳುನಾಡು ಯೋಜನೆಯನ್ನು ಕೈಬಿಡುವವರೆಗೂ ರಾಜ್ಯದಲ್ಲಿ ತಮಿಳು ಚಿತ್ರಪ್ರದರ್ಶನ ಜಾರಿಯಾಗಲು ಬಿಡುವುದಿಲ್ಲ. ಶೀಘ್ರವೇ ಯೋಜನೆಯನ್ನು ಕೈಬಿಡಬೇಕೆಂದು ಎಂದು ತಮಿಳುನಾಡು ಸರ್ಕಾರವನ್ನು ಆಗ್ರಹಿಸಿದರು.
ಈ ಮಧ್ಯೆ, ನಗರದ ಕೇಬಲ್ ಕಚೇರಿಗೆ ನುಗ್ಗಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಮಿಳು ಚಾನಲ್ಗಳು ಪ್ರಸಾರವಾಗದಂತೆ ಬಹಿಷ್ಕಾರ ಹಾಕಿದರು. ಅಲ್ಲದೆ, ಯೋಜನೆ ಕೈ ಬಿಡಬೇಕೆಂದು ಆಗ್ರಹಿಸಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, ಇಲ್ಲದಿದ್ದರೆ ನಡೆಯುವ ರಕ್ತಪಾತಕ್ಕೆ ಕರುಣಾನಿಧಿಯೇ ಕಾರಣರಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮೊದಲು ಕರುಣಾನಿಧಿ ಹೇಳಿಕೆಯನ್ನು ಖಂಡಿಸಿ ವಿಧಾನಸೌಧದ ಎದುರು ಕಪ್ಪು ಬಾವುಟ ಪ್ರದರ್ಶಿಸಿದರು. ಕರವೇ ಕಾರ್ಯಕರ್ತರು ಹಾಗೂ ಇತರ ಕನ್ನಡ ಪರ ಸಂಘಟನೆಗಳು ಬಳ್ಳಾರಿ, ಮೈಸೂರು, ಕೊಪ್ಪಳ, ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಳಿಸಿದ್ದು, ಕರುಣಾನಿಧಿಯವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
|