ತಮಿಳುನಾಡು ಸರಕಾರ ಜಾರಿಗೊಳಿಸುತ್ತಿರುವ ಹೊಗೇನಕಲ್ ಕುಡಿಯುವ ನೀರು ಯೋಜನೆಯನ್ನು 'ಅಕ್ರಮ' ಎಂದು ಬಣ್ಣಿಸಿದ ಬಿಜೆಪಿ, ತಕ್ಷಣವೇ ಅದನ್ನು ನಿಲ್ಲಿಸಲು ಮಧ್ಯಪ್ರವೇಶ ಮಾಡುವಂತೆ ಮಂಗಳವಾರ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
ಹೊಗೇನಕಲ್ ವಸ್ತುತಃ ಕರ್ನಾಟಕಕ್ಕೇ ಸೇರಿದ್ದು. ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಭೂಪಟದಲ್ಲೂ, ಅದು ಕರ್ನಾಟಕದ ಅವಿಭಾಜ್ಯ ಅಂಗವೇ ಆಗಿತ್ತು ಎಂದು ಹಿರಿಯ ಬಿಜೆಪಿ ನಾಯಕ ಎಚ್.ಎನ್.ಅನಂತ್ ಕುಮಾರ್, ತಮ್ಮ ಪಕ್ಷದ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ, ಸುದ್ದಿಗಾರರಿಗೆ ಹೇಳಿದರು.
ಯೋಜನೆ ಮುಂದುವರಿಸುವ ತಮಿಳುನಾಡು ನಿರ್ಧಾರದ ವಿರುದ್ಧ ನಾವು ಮೌಖಿಕ ಪ್ರತಿಭಟನೆ ಸಲ್ಲಿಸಿದ್ದೇವೆ ಎಂದವರು ನುಡಿದರು. ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಮತ್ತು ಪಕ್ಷದ ವಕ್ತಾರ ಸುರೇಶ್ ಕುಮಾರ್ ಕೂಡ ಇದ್ದರು.
ಕಾವೇರಿ ನದಿ ಜಲ ವಿವಾದ ಮಂಡಳಿಯೆದುರು ತಮಿಳುನಾಡು ಹೊಗೇನಕಲ್ ಯೋಜನೆ ವಿಷಯವನ್ನು ಯಾವತ್ತಿಗೂ ಪ್ರಸ್ತಾಪಿಸಿರಲಿಲ್ಲ ಎಂದ ಅನಂತ್ ಕುಮಾರ್, ಈ ಕುರಿತು ಕರುಣಾನಿಧಿ ಹೇಳಿಕೆ ಪ್ರಚೋದನಕಾರಿ ಎಂದರು.
ಕೇಂದ್ರವು ತಕ್ಷಣವೇ ಮಧ್ಯಪ್ರವೇಶಿಸಿ ಈ ಅಕ್ರಮ ಯೋಜನೆ ನಿಲ್ಲಿಸಲು ಆದೇಶಿಸಬೇಕು ಎಂದು ಆಗ್ರಹಿಸಿದ ಅವರು, ಮಂಡಳಿಯ ನಿರ್ಣಯ ಮತ್ತು ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗುತ್ತಿದೆ ಎಂದರು.
ಈ ಯೋಜನೆಗಾಗಿ ತಮಿಳುನಾಡು ಸರಕಾರವು ಕೇಂದ್ರ ಜಲ ಆಯೋಗ ಹಾಗೂ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದಿಂದ ಅನುಮತಿಯನ್ನೂ ಪಡೆದಿಲ್ಲ ಎಂದು ಅನಂತ್ ಹೇಳಿದರು.
|