ಚರ್ಚ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಯಾಗಿದ್ದ ಬಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರನ್ನು ಶನಿವಾರ ಬೆಳಿಗ್ಗೆ ಮಂಗಳೂರು ಜೈಲ್ನಲ್ಲಿದ್ದ ಅವರನ್ನು ಬಿಡುಗಡೆಗೊಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಚರ್ಚ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಂದ್ರ ಕುಮಾರ್ ವಿರುದ್ಧ ನಾಲ್ಕಾರು ದೂರು ದಾಖಲಾಗಿದ್ದವು. ಇತ್ತೀಚೆಗಷ್ಟೇ ಹೈಕೋರ್ಟ್ ಜಾಮೀನು ನೀಡಿದ್ದರೂ ಕೂಡ, ಮಂಗಳೂರು ಜಿಲ್ಲಾ ನ್ಯಾಯಾಲಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾಮೀನು ನಿರಾಕರಿಸಿತ್ತು.
ಇದೀಗ ಮಂಗಳೂರು ಜಿಲ್ಲಾ ನ್ಯಾಯಾಲಯ ಶುಕ್ರವಾರ ಮಹೇಂದ್ರ ಕುಮಾರ್ಗೆ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮಂಗಳೂರು ಸಬ್ ಜೈಲಿನಿಂದ ಅವರನ್ನು ಬಿಡುಗಡೆಗೊಳಿಸಿದೆ.
ಪ್ರತಿಕ್ರಿಯೆ: ಜೈಲಿನಿಂದ ಬಿಡುಗಡೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ, ಭಯೋತ್ಪಾದನೆ ವಿರುದ್ಧದ ತಮ್ಮ ಸಮರ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ, ಇದು ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಸಂಭ್ರಮಾಚರಣೆ: ಮಹೇಂದ್ರ ಕುಮಾರ್ ಅವರು ಜೈಲಿನಿಂದ ಬಿಡುಗಡೆಗೊಳ್ಳುತ್ತಿದ್ದಂತೆಯೇ ಜೈಲಿನ ಹೊರಭಾಗದಲ್ಲಿ ನೆರೆದಿದ್ದ ಬಜರಂಗದಳದ ನೂರಾರು ಕಾರ್ಯಕರ್ತರು ಜೈಘೋಷ ಕೂಗುವ ಮೂಲಕ ಸಂತಸ ವ್ಯಕ್ತಪಡಿಸಿದರು. |