ಲೇಖನ
ಮುಖ್ಯ ಪುಟ » ಮನರಂಜನೆ » ಯಕ್ಷಗಾನ » ಲೇಖನ » ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 2- ಮಗು ಅರ್ಥ ಹೇಳುತ್ತಾನೆ (Yakshagana | Kuriya Vittala Shastri | Biography | Bannada Baduku | Yakshagana Article in Kannada | Kannada Website)
ಹಿಂದಿನದು|ಮುಂದಿನದು
ಪರವಾಗಿಲ್ಲ ಹುಡುಗ
ಒಂದು ಬಾರಿ ಗಂಟಲು ಸರಿ ಮಾಡಿಕೊಂಡು, ಕೆಮ್ಮಿ, ನನ್ನ ಗಮನವನ್ನು ಅವರೆಡೆಗೆ ಸೆಳೆದರು. ಕಣ್ಸನ್ನೆಯಿಂದ ಧೈರ್ಯ ಇತ್ತರು.
ಪದ್ಮ ಕೋಮಲೆಯ ಪ್ರವೇಶದ ಪದ್ಯಕ್ಕೆ ಇದ್ದ ಅರ್ಥವನ್ನು ಹೇಗಾದರೂ ಹೇಳಿ ಮುಗಿಸಿದೆ. ಸಭೆ ಮೊತ್ತ ಮೊದಲನೆಯ ಬಾರಿ ಕೇಳಿಸಿದ ಮಾತುಗಳಿಗೆ ಪ್ರೋತ್ಸಾಹದ ಪ್ರತಿಕ್ರಿಯೆಯನ್ನೇ ತೋರಿತು. ಮುಂದಿನ ಪದ್ಯಗಳಿಗೆ ಅರ್ಥ ಹೇಳಲು ಅಷ್ಟೊಂದು ತೊಡಕಾಗಲಿಲ್ಲ.
ಅಂತೂ ಅಂದು ಬಂದಿದ್ದ ಮಹನೀಯರ ಬಾಯಿಂದ 'ಪರವಾಗಿಲ್ಲ ಹುಡುಗ' ಎನ್ನಿಸಿಕೊಂಡೆ. ನನ್ನ ಹೊಸ ಹುಚ್ಚನ್ನು ತಂದೆಯವರೂ ಗಮನಿಸಿದರು.

ಇದೊಂದು ಹುಚ್ಚು ಎಂದು ನುಡಿದರಾದರೂ, ಹುಚ್ಚಿನ ಆ ಬಳ್ಳಿಗೆ ಕಿಚ್ಚು ಹಚ್ಚಲಿಲ್ಲ. ನೀರನ್ನೆರೆದು ಪ್ರೋತ್ಸಾಹಿಸಿದರು. ಅದೊಂದು ದೃಷ್ಟಿಯಲ್ಲಂತೂ ನಾನು ಪುಣ್ಯವಂತ.

ಸಾಮಾನ್ಯವಾಗಿ ನಮ್ಮೂರಲ್ಲಿ ಯಕ್ಷಗಾನಕ್ಕೆ ಧಾರಾಳ ಪ್ರೋತ್ಸಾಹವಿದ್ದರೂ, ಅದು ದೂರದಿಂದ ನೋಡಿ ಆನಂದಿಸಬಹುದಾದ ಬೆಟ್ಟವೆಂದೇ ಭಾವನೆ ಬೆಳೆದಿತ್ತು. ಬಳಿಗೆ ಹೋಗಬಾರದು- ಒಳಗೆ ಸೇರಿ ಅಲ್ಲಿ ಬೆಳೆಯಬಾರದು ಎನ್ನುವವರೇ ಹೆಚ್ಚಾಗಿದ್ದರು.

ಯಕ್ಷಗಾನ (ತಾಳಮದ್ದಳೆ) ಕೂಟಗಳಲ್ಲಿ ರಾತ್ರಿಯಿಡೀ ನಿದ್ದೆಗೆಟ್ಟು ಭಾಗವಹಿಸಿ ಮನೆಗೆ ನಿದ್ದೆ ಕಳೆಯಲು ಬಂದರೂ, ಪ್ರಸಂಗ- ಅರ್ಥ- ಪಾತ್ರಗಳ ಗುಂಗಿನಲ್ಲೇ ಇರುವುದು, ಒಂದಷ್ಟು ಮಾತು ಬಲ್ಲವನ ಮಟ್ಟಕ್ಕೆ ಏರಿದ ತರುವಾಯ ಎದುರಾಳಿ ಆಗುವವನ ಮುಖಭಂಗ ಮಾಡುವುದು ಹೇಗೆ ಎಂಬ ಯೋಚನೆಯ ಸುಳಿಯಲ್ಲೇ ಸುತ್ತಿ ಸಲ್ಲದ ಸಾಹಿತ್ಯದ ಸಂಗ್ರಹಕ್ಕೆ ಹೊರಡುವುದು, ಯಾರಿಗೂ ಅರ್ಥವಾಗದ ಕ್ಲಿಷ್ಟ ಪದಗಳನ್ನೇ ಸಂಗ್ರಹಿಸಿ ಹೇಳುವುದು, ಇವೆಲ್ಲ ಸಾಮಾನ್ಯ ಅಭ್ಯಾಸಗಳೆಂದೇ ಜನರಲ್ಲಿ ಬೆಳೆದಿದ್ದ ಭಾವನೆ.

ಅಂದಿನ ವೇಷಧಾರಿಗಳ ಸ್ಥಿತಿ
WD
ಇನ್ನು ಬಯಲಾಟಗಳಲ್ಲಿ ವೇಷಧಾರಿಯಾಗಿ ಮುಂದುವರಿಯಲೆಂದು ಹೊರಟವನ ಬಗ್ಗೆ ಮತ್ತೂ ಹೆಚ್ಚಿನ ಕಳವಳ ಇರುತ್ತಿತ್ತು. ತಾಳಮದ್ದಳೆಯಲ್ಲಾದರೆ, ಕೂಟ ಮುಗಿದು ಮನೆಗೆ ಬರುವ ಹವ್ಯಾಸವಾದರೂ ಇರುತ್ತದೆ. ಅದೊಂದು ಸಂಭಾವನೆ ತಾರದ ಹವ್ಯಾಸ ಎಂದಾದ ಕಾರಣ ಜೀವನೋಪಾಯಕ್ಕೆ ಬೇರೆಯೇ ಒಂದು ವೃತ್ತಿಯನ್ನು ಅವಲಂಬಿಸಿರಬೇಕಾಗುತ್ತದೆ. ಆಟದಲ್ಲಾದರೆ ಹಾಗಲ್ಲ. ಇಂದು ಒಂದು ಊರಿನಲ್ಲಿ ಇದ್ದರೆ ನಾಳೆ ಇನ್ನೊಂದು ಗ್ರಾಮಕ್ಕೆ ಪಯಣ. ಮನೆ ಬಿಟ್ಟ ಮಗ ತಿರುಗಿ ಬರಬೇಕಾದರೆ ಆರು ತಿಂಗಳುಗಳು ಕಳೆದೇ ಸರಿ. ಅಲ್ಪವಾದರೂ, ಕಾಸು ಕೈಯಲ್ಲಿ ತಿರುಗುವ ಕಾರಣ, ಕುಟುಂಬದ ನಿಯಂತ್ರಣಕ್ಕೆ ಯಾವುದೇ ರೀತಿಯ ಅವಕಾಶ ಅಲ್ಲಿ ಇಲ್ಲ- ಇತ್ಯಾದಿ ಕಾರಣಗಳು, ಕಲಾವಿದನಾಗ ಬಯಸುವವನಿಗೆ ಹಿರಿಯರು ಅಡ್ಡಿ ತಂದೊಡ್ಡುವ ಹಿನ್ನೆಲೆಗಳಾಗಿದ್ದುವು.

ಅಂದಿನ ಕಾಲದ ಯಕ್ಷಗಾನ ಮೇಳಗಳ ಮತ್ತು ವೇಷಧಾರಿಗಳ ಸ್ಥಾನ ಶೋಚನೀಯವಾಗಿತ್ತು. ಕಲಾವಿದರು ಎಲ್ಲರ ಪರಿಸ್ಥಿತಿಯೂ ಹಾಗೆಯೇ.
ರಾತ್ರೆಯ ಹೊತ್ತು ರಾಜಾಧಿರಾಜರಾಗಿ ಮೆರೆದ ಕಲಾವಿದರು, 'ಸ್ವರ್ಗ ವೈಭವದ ಭೋಗವನ್ನುಣ್ಣುವುದಾಗಿ' ಸಾರಿದ್ದ ದೇವೇಂದ್ರರು, ಹಗಲಿನಲ್ಲಿ ಒಂದು ಹೊತ್ತಿನ ಗ್ರಾಸಕ್ಕಾಗಿ ಪರದಾಡಬೇಕಾಗುತ್ತಿತ್ತು.

ಮರದಡಿಯಲ್ಲಿ ಮೇಳಗಳ ಬಿಡಾರ ಇರುವುದು ದೈನಂದಿನ ಸಾಮಾನ್ಯ ಘಟನೆ. ನಾಲ್ಕು ಬಿದಿರ ತುಂಡುಗಳನ್ನು ಊರಿ, ಅವುಗಳಿಗೆ ಮಾವಿನ ಎಲೆಗಳ ಅಲಂಕಾರ ಮಾಡಿದ 'ರಂಗಮಂಟಪ'ದಲ್ಲಿ ಬಯಲಾಟ ನಡೆಯುವುದು ಎಂದಿನ ಅನುಭವ.

ಆರು ತಿಂಗಳ ಅಲೆದಾಟದಲ್ಲಿ ದೊರೆತು ಉಳಿದ ದುಡಿಮೆಯ ಹಣ, ನಿರುದ್ಯೋಗದ ಆರು ದಿನಗಳಿಗೂ ಸಾಕಾಗುತ್ತಿರಲಿಲ್ಲ. ದೂರದಿಂದ ವೇಷಗಳನ್ನು ನೋಡಿ ಆನಂದಿಸುವ ಊರವರಿಗೂ, ಮೇಳದವರು ಎಂದರೆ ತಿರಸ್ಕಾರ. ಅವರಿಗೆ ಸಮಾಜ ಕೊಡುವ ಗೌರವ- ನಕಾರ. ಮರ್ಯಾದಸ್ಥರು ಮರೆಯಬೇಕಾದ ಪ್ರಪಂಚವೇ ಅದಾಗಿತ್ತು.

ಆದರೆ ತೀರ್ಥರೂಪರು ಆ ಪ್ರಪಂಚಕ್ಕೆ ಧೈರ್ಯವಾಗಿ ಕಾಲಿರಿಸಿದ್ದಲ್ಲದೆ ಅದರ ಸುಧಾರಣೆಯಲ್ಲಿ ಆಸಕ್ತರಾಗಿದ್ದರು. ತಮ್ಮ ಮಿತ್ರವರ್ಗದವರೂ ಆಸಕ್ತಿ ವಹಿಸುವಂತೆ ಮಾಡಿದ್ದರು. ಸಣ್ಣ ಪುಟ್ಟ ಪರಿಮಾಣದಲ್ಲಾದರೂ ನಮ್ಮ ಮನೆಯಲ್ಲೇ ಯಕ್ಷಗಾನ (ತಾಳಮದ್ದಳೆ) ಕೂಟಗಳು ನಡೆಯುವಂತೆ ಮಾಡಿದ್ದರು.

ಮಾರ್ಗದರ್ಶನ
ನಾನು ಕೋಳ್ಯೂರಿನ ಕೂಟದಲ್ಲಿ ಭಾಗವಹಿಸಿದ ನಂತರ, ನನ್ನ ಆಸೆ, ಅವರ ಪ್ರೋತ್ಸಾಹದಿಂದಾಗಿ ಬೆಳೆಯಿತು. ಸರಿಯಾದ ಪ್ರೋತ್ಸಾಹವಿತ್ತು. ಆಗತ್ಯದ ವಿಮರ್ಶೆಗಳನ್ನೂ ಒದಗಿಸಿ ನನ್ನ ಅಭಿರುಚಿ ವಿಕಾಸಗೊಳ್ಳುವಂತೆ ಮಾಡಿದವರು ಅವರೇ.

ಯಕ್ಷಗಾನದಲ್ಲಿ ಅರ್ಥದ ಮಾತಿಗೆ ತೂಕವಿರಬೇಕು. ಯಾವ ರೀತಿಯ ಏರಿಳಿತವೂ ಇಲ್ಲದೆ, ಮೈಲುದ್ದದ ಮಾತುಗಳ ಮಾಲೆಯನ್ನು ಕಟ್ಟುವುದಕ್ಕೆ ಕಲಾವಿದನ ಪಾಂಡಿತ್ಯ ಸೀಮಿತಗೊಳ್ಳಬಾರದು. ರಸಪೋಷಣೆ- ಭಾವ ಪ್ರೇರಣೆಗಳು ಬೇಕಾದಲ್ಲಿ ಪಾತ್ರಗಳ ಪರಸ್ಪರ ಸಂಭಾಷಣೆಗೆ ಅವಕಾಶ ಇರಬೇಕು. ಎದುರಾಗಿ ಅರ್ಥಹೇಳುವವನು ಚಿಕ್ಕವನಾದರೂ, ಅವನಿಗೇ ಪ್ರೋತ್ಸಾಹ ದೊರಕಬೇಕು. ಕಥೆಯ ಸನ್ನಿವೇಶ ಕೇಳುವವರ ಕಣ್ಣೆದುರು ಮೈವೆತ್ತು ನಿಲ್ಲಬೇಕು ಎಂಬಿತ್ಯಾದಿ ಅಂಶಗಳನ್ನು ನಿದರ್ಶನಗಳೊಂದಿಗೆ ನನ್ನ ತಲೆಗೆ ತುರುಕಿದವರು ಅವರೇ.

WD

ರೇಡಿಯೋ ನಾಟಕಗಳನ್ನು ನಾನು (ಈಚೀಚೆಗೆ) ಕೇಳಿದಾಗಲೆಲ್ಲ, ಅವರ ಉಪದೇಶಗಳ ನೆನಪು ಬರುತ್ತದೆ. ದಶಕಗಳ ಹಿಂದೆ ಅವರು ಹೇಳಿದ್ದ ಮಾತುಗಳು ಮರುಕಳಿಸುತ್ತವೆ. (ಮುಂದಿನ ವಾರಕ್ಕೆ)

ನಿರೂಪಣೆ: ಮಂಗಳೂರಿನ ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. 1928 -1997)

ಹಿಂದಿನದು|ಮುಂದಿನದು
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಯಕ್ಷಗಾನ, ಕುರಿಯ ವಿಠಲ ಶಾಸ್ತ್ರಿ, ಆತ್ಮಕಥನ, ಬಣ್ಣದ ಬದುಕು, ಪದ್ಯಾಣ ಗೋಪಾಲಕೃಷ್ಣ, ಪಗೋ, ಕನ್ನಡ ಯಕ್ಷಗಾನ, ಕನ್ನಡ ವೆಬ್ ಸೈಟ್, ಕನ್ನಡ ಲೇಖನ, ಕರ್ನಾಟಕ ಕಲೆ, ಕನ್ನಡ ಲೇಖನಗಳು, ಯಕ್ಷಗಾನ ಲೇಖನ