'ಅಬ್ದುಲ್ ಸಮದ್ ಭಟ್ಕಳನ ಬಂಧನ ನಿಜಕ್ಕೂ ಆಘಾತ ತಂದಿದೆ. ನನ್ನ ಮಗ ಉಗ್ರನಲ್ಲ...ಅಮಾಯಕ, ಆತ ದೇಶವಿರೋಧಿ ಕೃತ್ಯ ಮಾಡುವವನೂ ಅಲ್ಲ'...ಹೀಗೆಂದವರು ಸಮದ್ ತಾಯಿ ರೇಹಾನಾ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನನ್ನ ಮಗ ಪುಣೆ ಸ್ಫೋಟದಲ್ಲಿ ಭಾಗಿಯಾಗಿಲ್ಲ, ಆತನ ವೀಸಾ ಅವಧಿ ಮುಗಿದಿದ್ದರಿಂದ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ. ಈ ಸಂದರ್ಭದಲ್ಲಿಯೇ ನನ್ನ ಮಗನನ್ನು ಬಂಧಿಸಿರುವುದು ಆಘಾತ ತಂದಿದೆ. ಯಾವುದೇ ತಪ್ಪು ಮಾಡದ ನನ್ನ ಮಗನನ್ನು ಬಂಧಿಸಿರುವುದು ಸರಿಯಲ್ಲ ಎಂಬುದು ರೇಹಾನಾ ಆರೋಪ.
ಭಟ್ಕಳದ ಮುಕ್ತುದ್ ನಿವಾಸಿಯಾಗಿರುವ ರೇಹಾನಾ, ತನ್ನ ಮಗ ಫೆಬ್ರುವರಿ ತಿಂಗಳಿನಲ್ಲಿ ಮನೆಯಲ್ಲಿಯೇ ಇದ್ದ, ಅಲ್ಲದೇ ಪುಣೆ ಸ್ಫೋಟ ದಿನದಂದು ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದು, ಆತ ಮನೆಯಲ್ಲಿಯೇ ಇದ್ದ. ಹಾಗಿದ್ದ ಮೇಲೆ ಸ್ಫೋಟ ನಡೆಸಲು ಹೇಗೆ ಸಾಧ್ಯ ಎಂಬುದು ರೇಹಾನಾ ಪ್ರಶ್ನೆ. ಆತನನ್ನು ಉಗ್ರ ಎಂದು ಬಂಧಿಸಿರುವುದಕ್ಕೆ ಏನೆಂದು ಹೇಳಬೇಕೆಂದು ತೋಚುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಪುಣೆ ಸ್ಫೋಟದ ಪ್ರಮುಖ ರೂವಾರಿ ಎಂದು ಶಂಕಿಸಲಾಗಿದ್ದ ಸಮದ್ ಭಟ್ಕಳನನ್ನು ದುಬೈನಿಂದ ಆಗಮಿಸಿದ್ದ ಸಂದರ್ಭದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಹಾರಾಷ್ಟ್ರದ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದರು.
ಸ್ಫೋಟಕ್ಕೂ ಮುನ್ನ ಸಮದ್ ಪುಣೆಯಲ್ಲಿದ್ದ?: ಫೆಬ್ರುವರಿ 13ರಂದು ನಡೆದ ಪುಣೆಯ ಜರ್ಮನ್ ಬೇಕರಿ ಸ್ಫೋಟಕ್ಕೂ 15 ದಿನಗಳ ಮುನ್ನ ಸಮದ್ ಭಟ್ಕಳ್ ಈ ಬೇಕರಿ ಸುತ್ತಮುತ್ತ ಇದ್ದಿರುವುದನ್ನು ಕೆಲವು ಸ್ಥಳೀಯರು ಗಮನಿಸಿದ್ದರಂತೆ. ಜನವರಿ ಅಂತ್ಯದ ವೇಳೆಯಲ್ಲಿ ಬೇಕರಿ ಇರುವ ಗೋರೆಗಾಂವ್ ಪಾರ್ಕ್ ಸಮೀದ ಭಟ್ಕಳ್ ಎರಡು ಬಾರಿ ಕಾಣಿಸಿಕೊಂಡಿರುವುದಾಗಿಯೂ ಎಟಿಎಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದರು.
ಜೂನ್ 1ರವರೆಗೆ ಪೊಲೀಸ್ ಕಸ್ಟಡಿ: ಬಂಧಿತ ಅಬ್ದುಲ್ ಸಮದ್ನನ್ನು ಮಂಗಳವಾರ ಮೆಟ್ರೋಪಾಲಿಟನ್ ನ್ಯಾಯಾಲಯದ ಮುಂದೆ ಎಟಿಎಸ್ ಪೊಲೀಸರು ಹಾಜರು ಪಡಿಸಿದ್ದರು. 2009ರಲ್ಲಿನ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳನನ್ನು ಪೊಲೀಸ್ ವಶಕ್ಕೆ ಒಪ್ಪಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ನಂತರ ನ್ಯಾಯಾಲಯ ಸಮದ್ನನ್ನು ಜೂನ್ 1ರವರೆಗೆ ಪೊಲೀಸ್ ವಶಕ್ಕೆ ನೀಡಿತು.