ಮುಸ್ಲಿಮರನ್ನು ಭಯೋತ್ಪಾದಕರಾಗಿ ಎಂದು ಕರೆ ನೀಡಿದ್ದ ಕಾರಣಕ್ಕಾಗಿ ಭಾರತದ ಪ್ರವಚನಕಾರ ಝಾಕೀರ್ ನಾಯ್ಕ್ ಬ್ರಿಟನ್ ಸರಕಾರದಿಂದ ನಿಷೇಧಕ್ಕೊಳಗಾದ ಬೆನ್ನಿಗೆ ಕೆನಡಾ ಕೂಡ ಅದೇ ಹಾದಿ ತುಳಿದಿದೆ. ನಾನು ನೀಡಿದ್ದ ಹೇಳಿಕೆಯನ್ನು ತಿರುಚಲಾಗಿದೆ, ನಾನು ಹೇಳಿದ್ದ ಭಯೋತ್ಪಾದನೆಯ ಅರ್ಥ ಬೇರೆ ಎಂದು ಸ್ಪಷ್ಟನೆ ನೀಡುತ್ತಿರುವ ನಾಯ್ಕ್ ಈಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಪ್ರತಿಯೊಬ್ಬ ಮುಸಲ್ಮಾನನೂ ಭಯೋತ್ಪಾದಕನಾಗಬೇಕು ಎಂಬ ತನ್ನ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದ ನಾಯ್ಕ್, 'ಭಯದ ಬೀಜವನ್ನು ಬಿತ್ತುವುದೇ ಭಯೋತ್ಪಾದನೆ. ಭಯವನ್ನು ಹುಟ್ಟಿಸುವವನೇ ಭಯೋತ್ಪಾದಕ. ಹಾಗಾಗಿ ಸಮಾಜವಿರೋಧಿ ಶಕ್ತಿಗಳನ್ನು ಎದುರಿಸುವ ಸಲುವಾಗಿ ಪ್ರತಿಯೊಬ್ಬ ಮುಸ್ಲಿಂ ಭಯೋತ್ಪಾದಕನಾಗಬೇಕು ಎಂದು ನಾನು ಹೇಳಿದ್ದೆ. ಮುಗ್ಧರನ್ನು ಬೆದರಿಸುವ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಹೆಚ್ಚಾಗಿ ಬಳಸಲಾಗುತ್ತದೆ ಎಂಬುದರ ಕುರಿತು ನನಗೆ ಅರಿವಿದೆ. ಹಾಗಾಗಿ ಯಾವುದೇ ಮುಸ್ಲಿಂ ಅಮಾಯಕ ವ್ಯಕ್ತಿಯೊಬ್ಬನನ್ನು ಬೆದರಿಸುವುದಾಗಲೀ, ಹಿಂಸೆ ನೀಡುವುದಾಗಲೀ ಮಾಡಬಾರದು' ಎಂದರು.
ಝಾಕೀರ್ ಅಬ್ದುಲ್ ಕರೀಂ ನಾಯ್ಕ್ಗೆ 2008ರ ಜುಲೈ ತಿಂಗಳಲ್ಲಿ ಬ್ರಿಟನ್ ಐದು ವರ್ಷಗಳ ಅವಧಿಯ ವೀಸಾ ನೀಡಿತ್ತು. ಆದರೆ ಬ್ರಿಟನ್ ನಿಷೇಧ ಹೇರುತ್ತಿದ್ದಂತೆ ಅವರು ಲಂಡನ್ಗೆ ಪ್ರಯಾಣ ಬೆಳೆಸುವ 12 ಗಂಟೆಗಳ ಮೊದಲು ವೀಸಾವನ್ನು ರದ್ದುಪಡಿಸಲಾಗಿತ್ತು. ಇದರ ಬೆನ್ನಿಗೆ ಕೆನಡಾ ಕೂಡ ನಾಯ್ಕ್ ದೇಶ ಪ್ರವೇಶಕ್ಕೆ ನಿಷೇಧ ಹೇರಿದೆ.
ಇಸ್ಲಾಮಿಕ್ ರೀಸರ್ಚ್ ಫೌಂಡೇಶನ್ ಮತ್ತು ಪೀಸ್ ಟಿವಿ ನಡೆಸುತ್ತಿರುವ 44ರ ಹರೆಯದ ನಾಯ್ಕ್ ಹೇಳಿಕೆಯ ಕಾರಣದಿಂದ ಬ್ರಿಟನ್ ಮತ್ತು ಕೆನಡಾಗಳು ನಿಷೇಧ ಹೇರಿವೆ. ಇದನ್ನು ಪ್ರಶ್ನಿಸುತ್ತಿರುವ ನಾಯ್ಕ್, 'ನಾನು ಆ ಹೇಳಿಕೆಯನ್ನು ನೀಡಿರುವುದು 1996ರಲ್ಲೇ ಹೊರತು, 2006ರಲ್ಲಲ್ಲ. ಅಷ್ಟಕ್ಕೂ ಅದರ ನಂತರ ನನಗೆ ಬ್ರಿಟನ್ ವೀಸಾ ನೀಡಿದೆ. ಈಗ ರದ್ದುಪಡಿಸಿರುವುದರ ಹಿಂದಿರುವ ಉದ್ದೇಶವೇನು. ನನ್ನ ಪ್ರಕಾರ ಇದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಇದನ್ನು ಬ್ರಿಟನ್ ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇನೆ' ಎಂದಿದ್ದಾರೆ.
ನಾಯ್ಕ್ ಬೆಂಬಲಕ್ಕೆ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಕೂಡ ಬಂದಿದ್ದಾರೆ. 'ಇದು ಅಪಾಯಕಾರಿ ಕ್ಷಣಗಳು. ಜನತೆಗೆ ಕಡಿಮೆ ಅರಿವು ಮತ್ತು ಹೆಚ್ಚು ಮನರಂಜನೆ ಸಿಗುತ್ತಿರುವ ಕಾಲವಿದು. ಬ್ರಿಟೀಷ್ ಸರಕಾರದ ನಿರ್ಧಾರವನ್ನು ಪ್ರಶ್ನಿಸುವ ಧೈರ್ಯ ತೋರಿಸಿರುವ ನಾಯ್ಕ್ ಅವರಿಗೆ ನಾನು ಕೃತಜ್ಞತೆ ಹೇಳಲೇಬೇಕು' ಎಂದಿದ್ದಾರೆ.
ಇದೇ ಮಹೇಶ್ ಭಟ್ ಪುತ್ರ ರಾಹುಲ್ ಭಟ್ ಭಯೋತ್ಪಾದನೆ ಆರೋಪ ಎದುರಿಸಿದ್ದನ್ನು ಇದೀಗ ಸ್ಮರಿಸಬಹುದಾಗಿದೆ. ಪಾಕಿಸ್ತಾನ ಸಂಜಾತ ಅಮೆರಿಕಾ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲೀ ಜತೆಗಿನ ಸಂಬಂಧ ಹಿನ್ನೆಲೆಯಲ್ಲಿ ರಾಹುಲ್ ಭಟ್ ಪೊಲೀಸರಿಂದ ತೀವ್ರ ವಿಚಾರಣೆಗೊಳಗಾಗಿದ್ದರು. ಇದರಿಂದ ಭಟ್ ತೀವ್ರವಾಗಿ ನೊಂದುಕೊಂಡಿದ್ದರು.