ತನ್ನ ಪುತ್ರ ಹಾಗೂ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮೇಲೆ ಶೂ ಎಸೆದ ಪ್ರಕರಣವನ್ನು ಹಗುರವಾಗಿ ಪರಿಗಣಿಸಿರುವ ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ, ಇಂತಹ 'ಗೌರವ' ಪಡೆದುಕೊಂಡ ಅಮೆರಿಕಾ ಮಾಜಿ ಅಧ್ಯಕ್ಷ ಜಾರ್ಜ್ ಬುಶ್, ಪಾಕಿಸ್ತಾನಿ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಮುಂತಾದ ಗಣ್ಯರ ಸಾಲಿಗೆ ಮುಖ್ಯಮಂತ್ರಿಯೂ ಸೇರಿದಂತಾಗಿದೆ ಎಂದಿದ್ದಾರೆ.
ಇಂತಹ ಪಾರಿತೋಷಕಗಳನ್ನು ಪಡೆದಿರುವ ಅಮೆರಿಕಾ ಅಧ್ಯಕ್ಷ ಜಾರ್ಜ್ ಬುಶ್, ಗೃಹಸಚಿವ ಪಿ. ಚಿದಂಬರಂ, ಪಾಕಿಸ್ತಾನಿ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಮುಂತಾದವರ ಸಾಲಿನಲ್ಲಿ ಆತ ಕೂಡ ಸೇರಿದ್ದಾರೆ. ಇದೂ ಅದ್ಭುತವೆನಿಸುವ ವಿಚಾರವೇ ಸರಿ ಎಂದು ಸಂಸತ್ತಿನ ಹೊರಗಡೆ ಪ್ರಸಂಗದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ.
ಶ್ರೀನಗರದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯುತ್ತಿದ್ದಾಗ ಅಮಾನತುಗೊಂಡಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಒಬ್ಬ ಒಮರ್ ಅವರತ್ತ ಶೂ ಎಸೆದಿದ್ದ. ಆದರೆ ಅದು ಗುರಿ ತಪ್ಪಿತ್ತು. ಘಟನೆ ಹಿನ್ನೆಲೆಯಲ್ಲಿ ನಾಲ್ವರು ಅಧಿಕಾರಿಗಳೂ ಸೇರಿದಂತೆ 15 ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಈ ಹಿಂದಿನ ಎಲ್ಲಾ 'ಕ್ರಾಂತಿಕಾರಿ'ಗಳಂತೆ ಒಮರ್ ಅವರತ್ತ ಶೂ ತೂರಿದ್ದ ವ್ಯಕ್ತಿಯೂ ಗುರಿ ತಪ್ಪಿದ್ದ. ಆದರೆ ತಕ್ಷಣವೇ ಆತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಇದು ಭದ್ರತಾ ವ್ಯವಸ್ಥೆಯಲ್ಲಿನ ಲೋಪವನ್ನು ತೋರಿಸುತ್ತಿದೆ ಎಂದು ಫಾರೂಕ್ ಅಭಿಪ್ರಾಯಪಟ್ಟಿದ್ದಾರೆ.
ಅಂದರೆ ರಾಜ್ಯದಲ್ಲಿನ ಜನತೆಯ ಭ್ರಮನಿರಸನವನ್ನು ಇದು ಬಿಂಬಿಸುತ್ತಿಲ್ಲವೇ ಎಂದಾಗ, ಪ್ರಸಕ್ತ ಇರುವ ಪರಿಸ್ಥಿತಿಯನ್ನು ಹೋಗಲಾಡಿಸುವವರೆಗೆ ನಾವು ಹೋರಾಡಬೇಕಾಗುತ್ತದೆ. ನಾವು ಕಾಲಿಗೆ ಬುದ್ಧಿ ಹೇಳುವುದಿಲ್ಲ ಎಂದರು.
ಅಲ್ಲದೆ ಜಮ್ಮು-ಕಾಶ್ಮೀರವು ಯಾವತ್ತಿದ್ದರೂ ಅದು ಭಾರತದ ಭಾಗ. ದೇಶದಿಂದ ಅದನ್ನು ಬೇರ್ಪಡಿಸಬೇಕೆಂಬ ವಾದವನ್ನು ನಾನು ಬೆಂಬಲಿಸುವುದಿಲ್ಲ. ಭಾರತದೊಂದಿಗೆ ಇರಬೇಕು, ಇಲ್ಲವೇ ಭಾರತದೊಂದಿಗೆ ಮುಳುಗಬೇಕು ಎಂದು ತನ್ನ ನಿಲುವನ್ನು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.