ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಕರ್ನಾಟಕ ಬಿಜೆಪಿ ಸರಕಾರವನ್ನು ವಜಾಗೊಳಿಸಬೇಕು ಎಂದು ಸಂಸತ್ತಿನ ಉಭಯ ಸದನಗಳಲ್ಲಿ ಬಹುಜನ ಸಮಾಜವಾದಿ ಪಕ್ಷ ಮತ್ತು ಜಾತ್ಯತೀತ ಜನತಾದಳಗಳು ಆಗ್ರಹಿಸಿದ್ದು, ಕಲಾಪಕ್ಕೆ ಅಡ್ಡಿಪಡಿಸಿವೆ.
ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಮಾಯಾವತಿಯವರ ಬಿಎಸ್ಪಿ ಸದಸ್ಯರು ಗದ್ದಲ ಎಬ್ಬಿಸಿದರು. ರಾಜ್ಯಸಭೆಯಲ್ಲಿ ಬಿಎಸ್ಪಿಗೆ ಜೆಡಿಎಸ್ ಸದಸ್ಯರು ಕೂಡ ಬೆಂಬಲ ನೀಡಿ, ಕೇಂದ್ರವು ಕರ್ನಾಟಕ ಸರಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಇಂದು ಬೆಳಿಗ್ಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಎಸ್ಪಿ ಸಂಸದರು ಸದನದ ಬಾವಿಗಿಳಿದು, ಬಿಜೆಪಿ ನೇತೃತ್ವದ ಕರ್ನಾಟಕ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾರಂಭಿಸಿದರು.
ರಾಜ್ಯದಲ್ಲಿನ ಕೆಲವು ಪ್ರಮುಖ ಸಚಿವರುಗಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಆರೋಪಗಳಿರುವುದರಿಂದ ಕರ್ನಾಟಕ ಸರಕಾರವನ್ನು ವಜಾಗೊಳಿಸಬೇಕು ಎನ್ನುವುದು ಬಿಎಸ್ಪಿ ಸದಸ್ಯರ ಆಗ್ರಹವಾಗಿತ್ತು.
ಇದೇ ರೀತಿ ರಾಜ್ಯಸಭೆಯಲ್ಲೂ ಬಿಎಸ್ಪಿ ಸದಸ್ಯರು ಕೋಲಾಹಲ ಸೃಷ್ಟಿಸಿದ್ದಾರೆ. ಕಲಾಪ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ವೇಳೆಯನ್ನು ರದ್ದುಪಡಿಸಬೇಕು ಮತ್ತು ಕರ್ನಾಟಕದಲ್ಲಿನ ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆ ವಿಚಾರವನ್ನು ಚರ್ಚೆಗೆ ಸ್ವೀಕರಿಸಬೇಕು ಎಂದು ಬಿಎಸ್ಪಿ ಸದಸ್ಯ ಸತೀಶ್ ಮಿಶ್ರಾ ನೋಟೀಸ್ ನೀಡಿದ್ದರು.
ಬಿಎಸ್ಪಿ ಬೇಡಿಕೆಗೆ ಜೆಡಿಎಸ್ ಕೂಡ ಬೆಂಬಲ ನೀಡಿತ್ತು. ರಾಜ್ಯ ಸರಕಾರವನ್ನು ವಜಾಗೊಳಿಸಿ ಎಂದು ಕೇಂದ್ರವನ್ನು ಆಗ್ರಹಿಸಿತು.
ಆದರೆ ಪ್ರಶ್ನೋತ್ತರವನ್ನು ಆರಂಭಿಸಲು ಬಯಸಿದ್ದ ಸ್ಪೀಕರ್ ಹಮೀದ್ ಅನ್ಸಾರಿ, ಬಿಎಸ್ಪಿ ಮತ್ತು ಜೆಡಿಎಸ್ ಸದಸ್ಯರ ಬೇಡಿಕೆಯನ್ನು ಒಪ್ಪಿಕೊಳ್ಳಲಿಲ್ಲ. ಇದು ಪ್ರಶ್ನೋತ್ತರ ವೇಳೆಯಾಗಿರುವ ಕಾರಣ ಬ್ಯಾನರುಗಳನ್ನು ಪ್ರದರ್ಶಿಸಬೇಡಿ ಎಂದು ಸದನದಲ್ಲಿ ಮನವಿ ಮಾಡಿಕೊಂಡರು.
ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಇದ್ದಾಗ ಕಲಾಪವನ್ನು ನಾಳೆಗೆ ಮುಂದೂಡಿದರು.