ಮುಂಬೈ ದಾಳಿ ಕುರಿತು ಲಷ್ಕರ್ ಇ ತೋಯ್ಬಾದ ಝಾಕೀರ್ ರೆಹಮಾನ್ ಲಖ್ವಿ ಮತ್ತು ಇತರ ಆರು ಮಂದಿ ಶಂಕಿತರ ವಿಚಾರಣೆಗಾಗಿ ಆಯೋಗವೊಂದನ್ನು ರಚಿಸುವ ಪಾಕಿಸ್ತಾನದ ಪ್ರಸ್ತಾಪದ ಸಂಬಂಧ ಗೃಹಸಚಿವ ಪಿ. ಚಿದಂಬರಂ ಮತ್ತು ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಅವರು ದೂರವಾಣಿ ಮಾತುಕತೆ ನಡೆಸಿದ್ದಾರೆ.
ಪಾಕಿಸ್ತಾನದಲ್ಲಿ ಪ್ರಸಕ್ತ ನಡೆಯುತ್ತಿರುವ ಮುಂಬೈ ದಾಳಿ ಆರೋಪಿಗಳ ವಿಚಾರಣೆ ಮತ್ತು ಭದ್ರತಾ ವಿಚಾರಗಳ ಕುರಿತು ನಾವು ಈ ಸಂದರ್ಭದಲ್ಲಿ ಚರ್ಚೆ ನಡೆಸಿದೆವು ಎಂದು ಮಲಿಕ್ ಸಾಮಾಜಿಕ ಸಂಪರ್ಕತಾಣ ಟ್ವಿಟ್ಟರ್ನಲ್ಲಿ ಮಲಿಕ್ ಹೇಳಿಕೊಂಡಿದ್ದಾರೆ.
ಪಾಕಿಸ್ತಾನದ ಏಳು ಶಂಕಿತ ಆರೋಪಿಗಳ ವಿಚಾರಣೆ ಸುಸೂತ್ರವಾಗಿ ಮುಂದುವರಿಯುವ ಸಲುವಾಗಿ ಭಾರತದ ಇಬ್ಬರು ಪ್ರಮುಖ ಸಾಕ್ಷಿಗಳ ಸಾಕ್ಷ್ಯ ಅಗತ್ಯವಿದ್ದು, ಅದಕ್ಕಾಗಿ ಅಸ್ತಿತ್ವಕ್ಕೆ ಬರುವ ಆಯೋಗವು ಭಾರತಕ್ಕೆ ಭೇಟಿ ನೀಡುವ ಪ್ರಸ್ತಾಪವನ್ನು ಚಿದಂಬರಂ ಜತೆ ಪಾಕಿಸ್ತಾನಿ ಸಚಿವರು ಪ್ರಸ್ತಾಪಿಸಿದರು ಎಂದು ನಿನ್ನೆ ನಡೆದ ಮಾತುಕತೆಯ ಕುರಿತು ವಿವರಣೆ ನೀಡಿದ್ದಾರೆ.
ಅಲ್ಲದೆ ಪಾಕಿಸ್ತಾನದಲ್ಲಿ ವಿಚಾರಣೆ ಸುಸೂತ್ರವಾಗಿ ಮುಂದುವರಿಯಬೇಕಾದರೆ ಇಬ್ಬರು ಭಾರತೀಯರು ಪಾಕಿಸ್ತಾನದ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯುವ ಅಗತ್ಯವನ್ನೂ ನಾನು ಚಿದಂಬರಂ ಅವರಿಗೆ ಬಿಡಿಸಿ ಹೇಳಿದ್ದೇನೆ ಎಂದು ಮಲಿಕ್ ತಿಳಿಸಿದ್ದಾರೆ.
ಅದೇ ಹೊತ್ತಿಗೆ ಪಾಕಿಸ್ತಾನದಲ್ಲಿನ ಪ್ರವಾಹಕ್ಕೆ ಮಿಡಿದಿದ್ದ ಚಿದಂಬರಂ ಅವರನ್ನು ಸಚಿವರು ಪ್ರಶಂಸಿಸಿದ್ದಾರೆ.
ನಿನ್ನೆಯಷ್ಟೇ ಇಸ್ಲಾಮಾಬಾದ್ನಲ್ಲಿನ ಭಾರತೀಯ ರಾಯಭಾರಿ ಶರತ್ ಸಬರ್ವಾಲ್ ಜತೆ ಮಾತುಕತೆ ನಡೆಸಿದ್ದ ಆಂತರಿಕ ಸಚಿವ ಮಲಿಕ್, ಮುಂಬೈ ದಾಳಿಯ ಪಿತೂರಿದಾರರೆಂದು ಆರೋಪಿಸಲಾಗಿರುವ ಏಳು ಮಂದಿಯ ವಿಚಾರಣೆ ಮುಂದುವರಿಯುತ್ತಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದರು. ಅಲ್ಲದೆ ಭಾರತ ಪ್ರಸ್ತಾಪಿಸಿರುವ ವೀಡಿಯೋ ಕಾನ್ಫರೆನ್ಸ್ ಹೇಳಿಕೆಗೆ ಪಾಕಿಸ್ತಾನದ ಕಾನೂನಿನಲ್ಲಿ ಅವಕಾಶವಿಲ್ಲ ಎಂದೂ ತಿಳಿಸಿದ್ದರು.
ಈ ಕುರಿತು ನಾನು ಚಿದಂಬರಂ ಅವರ ಜತೆ ಮಾತುಕತೆ ನಡೆಸಿದ್ದೇನೆ. ಪ್ರಕರಣದ ವಿಚಾರಣೆಗಾಗಿ ಆಯೋಗವೊಂದನ್ನು ರಚಿಸುವ ಪ್ರಸ್ತಾಪವನ್ನು ಅವರ ಮುಂದಿಟ್ಟಿದ್ದೇನೆ ಎಂದು ಸಚಿವರು ತಿಳಿಸಿದ್ದರು.
ಇದಕ್ಕೆ ಚಿದಂಬರಂ 'ಪರಿಶೀಲನೆ' ನಡೆಸುವ ಭರವಸೆಯನ್ನು ಕೂಡ ನೀಡಿದ್ದರು ಎಂದು ಪಾಕಿಸ್ತಾನ ಹೇಳುತ್ತಿದೆ.