ಪ್ರಸಕ್ತ 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ನಲುಗುತ್ತಿರುವ ಕುಖ್ಯಾತ ಲಾಬಿಗಾರ್ತಿ ನೀರಾ ರಾಡಿಯಾ ಜತೆ ತನಗೆ ಮತ್ತು ತನ್ನ ನಾಯಕ ಎಲ್.ಕೆ. ಅಡ್ವಾಣಿಯವರಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ಯಾವತ್ತೂ ರಾಡಿಯಾಳನ್ನು ಭೇಟಿಯಾಗಿಲ್ಲ. ಇದು ಕಾಂಗ್ರೆಸ್ ಷಡ್ಯಂತ್ರ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.
ನಾನು ರಾಡಿಯಾರನ್ನು ಎದುರಾಬದುರಾಗಿ ಮುಖವನ್ನೇ ನೋಡಿಲ್ಲ. ಹಾಗಾಗಿ ಆಕೆಗೆ ಸಹಾಯ ಮಾಡಿದ್ದೇನೆ ಎಂಬ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ಹಗರಣದಿಂದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಮಾಡುತ್ತಿರುವ ಕುತಂತ್ರವಿದು ಎಂದು ಆರೋಪಿಸಿದರು.
ಮಹಾರಾಷ್ಟ್ರದ ಹೆಲಿಕಾಪ್ಟರ್ ಖರೀದಿ ವ್ಯವಹಾರದಲ್ಲಿ ತಾನು ರಾಡಿಯಾ ಪರ ಕೆಲಸ ಮಾಡಿದ್ದೇನೆ ಎಂಬ ಆರೋಪಗಳಿಗೆ ತಿರುಗೇಟು ನೀಡುತ್ತಿದ್ದ ಗಡ್ಕರಿ, ಅದನ್ನು ರುಜುವಾತುಪಡಿಸುವಂತೆ ಸವಾಲು ಹಾಕಿದರು.
ಬಿಜೆಪಿ ನಾಯಕತ್ವದ ಜತೆ ರಾಡಿಯಾ ನಿಕಟ ಸಂಬಂಧ ಹೊಂದಿದ್ದರು. ಆಗ ಕೇಂದ್ರದಲ್ಲಿ ಸಚಿವರಾಗಿದ್ದ ಬಿಜೆಪಿ ನಾಯಕ ಅನಂತ್ ಕುಮಾರ್ ಸಂಪುಟದ ರಹಸ್ಯಗಳು ಸೇರಿದಂತೆ ಹಲವು ವಿಚಾರಗಳಲ್ಲಿ ರಾಡಿಯಾರಿಗೆ ಹತ್ತಿರವಾಗಿದ್ದರು. ಅವರು ಕಮಿಷನ್ ರೂಪದಲ್ಲಿ ಹಣ ಕೂಡ ಪಡೆದುಕೊಂಡಿದ್ದರು ಎಂದು ರಾಡಿಯಾರ ಮಾಜಿ ಪಾಲುದಾರ ರಾವ್ ಧೀರಜ್ ಸಿಂಗ್ ಆರೋಪಿಸಿದ್ದರು.
ಧೀರಜ್ ಸಿಂಗ್ ನೈಜವಾಗಿರುವ ಎಲ್ಲಾ ವಿಚಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ನನ್ನ ಮತ್ತು ಅಡ್ವಾಣಿಯವರ ಮೇಲೆ ಮಾಡಿರುವ ಆರೋಪಗಳು ನಿರಾಧಾರ. ನನ್ನ ಪ್ರಕಾರ ಕಾಮನ್ವೆಲ್ತ್ ಗೇಮ್ಸ್ ಮತ್ತು 2ಜಿ ಹಗರಣಗಳಲ್ಲಿನ ವಿಚಾರದಲ್ಲಿ ಕಾಂಗ್ರೆಸ್ ಪರಿಶುದ್ಧವಾಗಿ ಹೊರ ಬರಬೇಕಿದೆ. ನಾನು ಇತರರ ಮೇಲೆ ಆರೋಪ ಮಾಡುವ ಮೂಲಕ ಸಚ್ಚಾರಿತ್ರ್ಯವಂತನಾಗಿ ಹೊರ ಹೊಮ್ಮಲು ಬಯಸುವುದಿಲ್ಲ ಎಂದು ಗಡ್ಕರಿ ನುಡಿದರು.
ಇದೇ ಹೊತ್ತಿಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ, ಹಗರಣಗಳು ಅವರ ಅವಧಿಯಲ್ಲೇ ನಡೆದಿರುವುದರಿಂದ ನಾಯಕತ್ವವೇ ನೈತಿಕ ಹೊಣೆಗಾರಿಕೆಯನ್ನು ಹೊರಬೇಕು. ಅವರು ಮುಂದಾಗುತ್ತಿದ್ದರೆ, ಇಂತಹ ಹಲವು ಅಕ್ರಮಗಳನ್ನು ತಡೆಯಬಹುದಿತ್ತು. ಹಾಗಾಗಿ ನೈತಿಕ ಹೊಣೆ ಹೊತ್ತು, ದೇಶದ ಹಿತಾಸಕ್ತಿಯನ್ನು ಪರಿಗಣಿಸಿ ರಾಜೀನಾಮೆ ನೀಡಬೇಕು ಎಂದರು.