ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ವಯಸ್ಕರು ನಡೆಸುವ ಸಲಿಂಗಕಾಮ ಅಪರಾಧವಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿಗೆ ಬಾಲಿವುಡ್ನ ಖ್ಯಾತ ನಟನಟಿಯರು ಸ್ವಾಗತ ವ್ಯಕ್ತಪಡಿಸಿದ್ದಾರೆ. ಸಲಿಂಗಕಾಮ ಕಾನೂನುಬದ್ದವಾಗಿರುವುದಕ್ಕೆ ಹಲವು ಸಲಿಂಗಿ ಗೆಳೆಯ ಗೆಳತಿಯರನ್ನು ಹೊಂದಿರುವ ಬಾಲಿವುಡ್ ನಟನಟಿಯರು ಈ ತೀರ್ಪಿನ ಹಿನ್ನೆಲೆಯಲ್ಲಿ ಸಂತೋಷ ಕೂಟ ಆಚರಿಸಿ ಹುರ್ರೇ ಎಂದಿದ್ದಾರೆ. ಸಲಿಂಗಕಾಮವುಳ್ಳ ಕಥಾವಸ್ತುವಿನ ಚಿತ್ರಗಳು ಕೂಡಾ ಈಗ ಬಾಲಿವುಡ್ಡಿನಲ್ಲಿ ಸಾಮಾನ್ಯವಾಗುತ್ತಿದೆ. ಇಂಥ ಸಂದರ್ಭ, ತೀರ್ಪಿನ ಕುರಿತು ಹಲವು ನಟ,ನಟಿ, ನಿರ್ದೇಶಕರ ವೈಯಕ್ತಿಕ ಅಭಿಪ್ರಾಯ ಇಲ್ಲಿದೆ.
ಲೆಸ್ಬಿಯನ್ (ಸ್ತ್ರೀ ಸಲಿಂಗ ಕಾಮಿ) ಫೋಟೋ ಶೂಟ್ನಲ್ಲಿ ಭಾಗವಹಿಸಿ ವಿವಾದಕ್ಕೀಡಾದ ನೀತುಚಂದ್ರ, ''ಇದೊಂದು ಉತ್ತಮ ಬೆಳವಣಿಗೆ. ವ್ಯಕ್ತಿ ಸ್ವಾತಂತ್ರ್ಯದ ನಿಟ್ಟಿನಲ್ಲಿ ಇಂತಹ ಹಕ್ಕು ನೀಡಬೇಕಾದುದು ತುಂಬಾ ಅಗತ್ಯ'' ಎಂದಿದ್ದಾರೆ.
ದೋಸ್ತಾನಾದಲ್ಲಿ ಗೇ (ಪುರುಷ ಸಲಿಂಗಕಾಮಿ) ಪಾತ್ರದಲ್ಲಿ ಕಾಣಿಸಿಕೊಂಡ ಜಾನ್ ಅಬ್ರಹಾಂ, ''ಪ್ರತಿಯೊಬ್ಬ ವ್ಯಕ್ತಿಯ ಸಂಗಾತಿಯ ಆಯ್ಕೆ ಪ್ರತಿಯೊಬ್ಬನ ಖಾಸಗಿ ವಿಷಯ ಹಾಗೂ ಮೂಲಭೂತ ಹಕ್ಕು. ಈಗಲಾದರೂ ಇಂಥದ್ದೊಂದು ಬೆಳವಣಿಗೆ ಆಗಿದ್ದು ಸಂತೋಷ. ನನಗೆ ಹಲವಾರು ಸಲಿಂಗಿ ಅಭಿಮಾನಿಗಳಿದ್ದಾರೆ. ನಾನು ದೋಸ್ತಾನಾ ಚಿತ್ರದಲ್ಲಿ ಇದೇ ವಿಷಯದ ಕುರಿತು ಇರುವ ಕಥಾಹಂದರದ್ಲಲಿ ಅಭಿನಯಿಸಿದ್ದೆ. ನಾನು ಆ ಚಿತ್ರ ಒಪ್ಪಿಕೊಂಡಿದ್ದು ಸಲಿಂಗಿಗಳ ಮೇಲೆ ದಯೆಯಿಂದ. ಅವರನ್ನು ಅಣಕಿಸುವುದು ನನ್ನ ಉದ್ದೇಶವಾಗಿರಲಿಲ್ಲ'' ಎನ್ನುತ್ತಾರೆ.
ಸಲಿಂಗಕಾಮಿಗಳ ಹಕ್ಕಿನ ಬಗ್ಗೆ ಹೋರಾಟವನ್ನೇ ಮಾಡಿದ್ದ ಸೆಕ್ಸೀ ನಟಿ ಸೆಲೀನಾ ಜೇಟ್ಲಿ, ''ನನಗೆ ಅಮೃತವೇ ಕುಡಿದಷ್ಟು ಸಂತಸವಾಗಿದೆ. ನನಗೆ ಸುಮಾರು ಒಂದು ಲಕ್ಷ ಎಸ್ಎಸ್ಗಳು ನನಗೆ ಬಂದಿವೆ. ಸಂದೇಶಗಳ ಸರಿಮಳೇ ನನ್ನ ಮೊಬೈಲಿಗೆ ಆಗಿದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂಥದ್ದೊಂದು ತೀರ್ಪು ಐತಿಹಾಸಿಕವಾದುದು. ಅಷ್ಟೇ ಅಲ್ಲ ನನ್ನ ಹಲವು ಸಮಯದ ಸಲಿಂಗಕಾಮಿಗಳ ಹಕ್ಕಿನ ಹೋರಾಟಕ್ಕೆ ಇದು ಸಿಕ್ಕಿದ ಜಯದಂತೆ ಅನಿಸಿದೆ. ಸಲಿಂಗಿಗಳಿಗೆ ಇದೊಂದು ಹೊಸತೊಂದು ಜೀವನದ ಆರಂಭ'' ಎನ್ನುತ್ತಾರೆ.
IFM
ನೀಲ್ ನಿತಿನ್ ಮುಖೇಶ್- ''ಅಬ್ಬಾ. ಅಂತೂ ಇಂಥದ್ದೊಂದು ತೀರ್ಪು ಹೊರಬಿತ್ತು ಅನ್ನೋದೇ ಸಂತಸ. ಸಲಿಂಗಿಗಳೂ ನಮ್ಮಂತೆ ಮಾನವರು ಎಂದು ಗುರುತಿಸಿದ್ದು ನನಗೆ ತುಂಬ ಖುಷಿ ತಂದಿದೆ. ಇನ್ನು ಅವರೂ ಕೂಡಾ ನಮ್ಮಂತೆ ಸಂತಸದಿಂದ ಬಾಳಬಹುದು.''
ಫ್ಯಾಷನ್ ಚಿತ್ರದಲ್ಲಿ 'ಗೇ'ಯೊಬ್ಬನನ್ನೇ ಗಂಡನನ್ನಾಗಿ ಪಡೆವ ಮಾಡೆಲ್ ಪಾತ್ರದಲ್ಲಿ ಕಾಣಿಸಿಕೊಂಡ ಮುಗ್ಧಾ ಗೋಡ್ಸೆ, ''ಕೋರ್ಟ್ನ ಈ ತೀರ್ಪು ಅತ್ಯಂತ ಒಳ್ಳೆಯ ಬೆಳವಣಿಗೆ. ಇದನ್ನು ನಾನು ಸ್ವಾಗತಿಸುತ್ತೇನೆ. ಒಬ್ಬ ಪುರುಷನಿಗೆ ಮಹಿಳೆಯನ್ನು ಪ್ರೀತಿಸುವ ಹಕ್ಕು ಇದೆಯೆಂದಾದರೆ, ಪುರುಷನಿಗೆ ಪುರುಷನನ್ನೇ ಪ್ರೀತಿಸುವ ಹಕ್ಕೂ ಇರಬೇಕು. ಸಲಿಂಗಕಾಮಿಗಳು ಎಷ್ಟು ದಿನ ತಮ್ಮ ಭಾವನೆಗಳನ್ನು ಅದುಮಿಟ್ಟುಕೊಂಡಾರು. ನನ್ನ ಹಲವು ಗೆಳೆಯರ ಭಾವನೆಗಳಿಗೆ ನ್ಯಾಯ ಸಿಕ್ಕಿದೆ ಎಂದು ನನಗೆ ಅತೀವ ಸಂತಸವಾಗಿದೆ'' ಎನ್ನುತ್ತಾರೆ.
ಸುಶ್ಮಿತಾ ಸೇನ್- ''ಇದೊಂದು ನಿಜವಾಗಿಯೂ ಅತ್ಯಪೂರ್ವ ದಿನ. ಪ್ರತಿಯೊಬ್ಬನ ಆಯ್ಕೆಯ ಸ್ವಾತಂತ್ರ್ಯಕ್ಕೆ ಸಾಮಾಜಿಕ ಹಾಗೂ ಕಾನೂನಿನ ಮನ್ನಣೆ ಸಿಕ್ಕಿದ್ದು ತುಂಬ ಉತ್ತಮ ಬೆಳವಣಿಗೆ. ಇಬ್ಬರ ನಡುವಿನ ಪ್ರೀತಿ ಕಾನೂನು ಅಪರಾಧ ಹೇಗಾಗುತ್ತದೆ ಎಂಬುದು ನನಗೆ ಯಾವತ್ತೂ ಅರ್ಥವಾಗಿಲ್ಲ. ಕೊನೆಗೂ ಸರ್ಕಾರದ ಕಣ್ತೆರೆದುದು ಸಂತೋಷ. ಮಾನವನ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬೆಲೆ ಬಂದುದಕ್ಕೆ ಅತೀವ ಸಂತೋಷವಾಗಿದೆ.''
ಇರ್ಫಾನ್ ಖಾನ್- ''ಇದು ಭಾರತ ವಿಶ್ವಕ್ಕೇ ತೆರೆದುಕೊಳ್ಳುವ ಮೊದಲ ಹೆಜ್ಜೆಯೇ ಸರಿ. ಈ ಹೊಸ ತೀರ್ಪಿನಿಂದ ಸಲಿಂಗಿಗಳಲ್ಲಿರುವ ಭಯ, ಸಂಕೋಚ ಹಾಗೂ ಅಪರಾಧ ಭಾವ ದೂರವಾಗುತ್ತದೆ. ಹಾಗೂ ಇಂಥವರ ಮೇಲೆ ಪೊಲೀಸ್ ದೌರ್ಜನ್ಯವೂ ಕಡಿಮೆಯಾಗುತ್ತದೆ. ನಾನು ಒಬ್ಬ ಸಲಿಂಗಿಯ ಪಾತ್ರದಲ್ಲಿ ಝೋಯಾ ಅಕ್ತರ್ರ ಕಿರುಚಿತ್ರದಲ್ಲಿ ನಟಿಸಿದ್ದೆ. ಪಾತ್ರದಲ್ಲೇ ಆ ಭಾವನೆಯಲ್ಲಿ ಮಿಳಿತಗೊಳಿಸಿ ಅಭಿನಯಿಸಿದ್ದ ನನಗೆ ಅವರ ಭಾವನೆಗಳ ಬೇಗುದಿ ಅರ್ಥವಾಗುತ್ತದೆ.''
ನೇಹಾ ಧೂಪಿಯಾ- ''ಇದೊಂದು ಮಹತ್ವದ ತೀರ್ಪು. ನಾವು ಸ್ವತಂತ್ರ ಭಾರತದಲ್ಲಿರುವವರು. ವ್ಯಕ್ತಿಯ ಆಯ್ಕೆಯ ಸ್ವಾತಂತ್ರ್ಯವೂ ಪ್ರತಿಯೊಬ್ಬನಿಗೆ ಇದೆ. ಇದೊಂದು ಅತ್ಯಪೂರ್ವ ಬೆಳವಣಿಗೆ ಹಾಗೂ ಅಭಿವೃದ್ಧಿಯ ಸಂಕೇತ.''
ಶತ್ರುಘ್ನ ಸಿನ್ಹಾ- ''ಹಳೆಯ ತುಕ್ಕುಹಿಡ ಕಾನೂನುಗಳು ಕೆಲಸಕ್ಕೇ ಬಾರದ ರಾಜಕಾರಣಿಗಳಂತೆ. ಅವುಗಳಿಂದ ಉಪಯೋಗ ಯಾವತ್ತೂ ಆಗುವುದಿಲ್ಲ. ಸೆಕ್ಷನ್ 377ಗೆ ತಿದ್ದುಪಡಿ ತಂದದ್ದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ಇಬ್ಬರು ವ್ಯಕ್ತಿಗಳ ಸಹಮತ ಹಾಸಿಗೆ ಹಂಚುವಿಕೆಯನ್ನು ತಡೆಯುವ ಹಕ್ಕು ಯಾರಿಗೂ ಇರುವುದಿಲ್ಲ. ಸರ್ಕಾರಕ್ಕೂ ಕೂಡಾ. ಇದರಿಂದ ದೇಶದ ಸಂಸ್ಕೃತಿಗೆ ಎಂದಿಗೂ ಹಾನಿಯಾಗುವುದಿಲ್ಲ. ಇಬ್ಬರು ಸಲಿಂಗಿಗಳು ಲೈಂಗಿಕ ಸಂಬಂಧ ಹೊಂದಿರುವುದು ವಿಶ್ವದೆಲ್ಲೆಡೆ ಇದೆ. ಈ ಸಲಿಂಗಿಗಳಿಬ್ಬರೂ ತಮ್ಮ ಸಂಬಂಧದಲ್ಲಿ ಆನಂದವಾಗಿದ್ದರೆ ಅದರಲ್ಲಿ ತಪ್ಪೇನಿದೆ?''
IFM
ಮನೀಷಾ ಕೊಯಿರಾಲ- ''ನನ್ನ ಹಲವು ಆತ್ಮೀಯ ಗೆಳೆಯರು ಸಲಿಂಗಿಗಳು. ಆದರೆ ಅವರೂ ಕೂಡಾ ಉತ್ತಮ ಮನಸ್ಸುಳ್ಳವರು. ನಮ್ಮಂತೆಯೇ ಜೀವಿಸುವವರು. ಹಳೆಯ ಪುರಾಣದ ಕಾನೂನುಗಳಇಗೆ ತಿದ್ದುಪಡಿ ತುಂಬಾ ಅಗತ್ಯ. ನಾವೀಗ ಸಾಕಷ್ಟು ಮುಂದುವರಿದಿದ್ದೇವೆ. ಒಬ್ಬನ ಲೈಂಗಿಕ ಕಾಮನೆಗಳಿಗೆ ಸಹಮತದ ಒಪ್ಪಿಗೆ ಮತ್ತೊಬ್ಬನಿಂದ ಇದ್ದರೆ ಇದಕ್ಕೆ ಕಾನೂನಿನ ಅಡ್ಡಿ ಯಾವತ್ತೂ ಬರಬಾರದು.''
ಅಮೃತಾ ಅರೋರಾ- ''ಅದ್ಭುತ ಸುದ್ದಿ. ನನಗೆ ತುಂಬ ಸಲಿಂಗಿ ಗೆಳೆಯರಿದ್ದಾರೆ. ಇದು ಆ ಎಲ್ಲ ಗೆಳೆಯರ ಜತೆ ಸಂತೋಷ ಕೂಟ ಆಚರಿಸುವ ಸಂಭ್ರಮ.''
ರಿಯಾ ಸೇನ್- ''ನನ್ನ ಹಲವು ಆತ್ಮೀಯ ಗೆಳೆಯರು ಸಲಿಂಗಿಗಳು. ನನಗೆ ಈ ತೀರ್ಪಿನಿಂದ ಅತ್ಯಪೂರ್ವ ಆನಂದವಾಗಿದೆ.''
ರೈಮಾ ಸೇನ್- ''ಪ್ರಜಾಪ್ರಭುತ್ವಕ್ಕೆ ಇಂತಹ ತೀರ್ಪಿನ ಅಗತ್ಯವಿತ್ತು.''
ಮಹೇಶ್ ಭಟ್- ''ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲು. ಯಾವುದೇ ಸರ್ಕಾರಕ್ಕೂ ಯಾವುದೇ ವ್ಯಕ್ತಿಯ ಸಂಗಾತಿಯ ಖಾಸಗಿ ಆಯ್ಕೆಯಲ್ಲಿ ಮೂಗು ತೂರಿಸುವ ಹಕ್ಕು ಇರುವುದಿಲ್ಲ.''
ಮಧುರ್ ಭಂಡಾರ್ಕರ್- ''ದೆಹಲಿ ಹೈಕೋರ್ಟ್ನ ಈ ತೀರ್ಪು ಉತ್ತಮ ಬೆಳವಣಿಗೆ. ಇದೊಂದು ಬೆಳವಣಿಗೆಯ ಹೆಜ್ಜೆ.''
ಸಂಜಯ್ ಸೂರಿ- ''ಸಲಿಂಗಕಾಮವನ್ನು ಕ್ರಿಮಿನಲ್ ಅಪರಾಧದ ದೃಷ್ಟಿಯಲ್ಲಿ ನೋಡುತ್ತಿದ್ದುದು ಮಾನವನ ಮೂಲಭೂತ ಹಕ್ಕನ್ನೇ ಮುರಿದಂತೆ ಎಂಬುದು ನನ್ನ ಅಭಿಪ್ರಾಯ. ಹಾಗಾಗಿ ಈ ತೀರ್ಪು ಒಂದು ಐತಿಹಾಸಿಕ ತೀರ್ಪು. ನಾನು ಸಲಿಂಗಿಯ ಪಾತ್ರ ಮಾಡಿದ್ದೇನೆ. ನನಗೆ ಅವರ ಭಾವನೆ ಅರ್ಥವಾಗುತ್ತದೆ. ಯಾವತ್ತೋ ಆಗಬೇಕಿದ್ದ ಕಾನೂನು ತಿದ್ದುಪಡಿ ಇಂದಾದರೂ ಆಯಿತಲ್ಲ ಎಂಬ ತೃಪ್ತಿಯಿದೆ''.
ಸಲಿಂಗಕಾಮ ಚಟುವಟಿಕೆ ಅಪರಾಧ ಎಂದು ಹೇಳಿರುವ 19ನೇ ಶತಮಾನದ ಕಾಯ್ದೆಗೆ ಸಂಬಂಧಿಸಿದಂತೆ ಭಾರತದ ನ್ಯಾಯಾಲಯವೊಂದು ನೀಡುವ ಪ್ರಥಮ ತೀರ್ಪು ಇದಾಗಿದೆ. ಈ ಹಿಂದೆ, ಗೃಹಸಚಿವಾಲಯವು ಇಂತಹ ಕೃತ್ಯವು ಅನೈತಿಕವಾದ ಕಾರಣ ಭಾರತದಲ್ಲಿ ಇದಕ್ಕೆ ಅವಕಾಶ ನೀಡಬಾರದು ಎಂದು ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಇಸ್ಲಾಂನ ದಿಯೋಬಂದ್ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ನೀವೇನಂತೀರಾ?