ರಾಮಾಯಣ ಮತ್ತೆ ಬರುತ್ತಿದೆ. ದಶಕಗಳ ಹಿಂದೆ ಟಿವಿ ಪ್ರೇಕ್ಷಕರನ್ನು ಅಗಾಧವಾಗಿ ಸೆಳೆದಿದ್ದ, ಆಕರ್ಷಿಸಿದ್ದ ಹಾಗೂ ರಾಮ ಸೀತೆಯರ ಪಾತ್ರಧಾರಿಗಳನ್ನೇ ನಿಜವಾದ ದೇವರು ಧರೆಗಿಳಿದು ಬಂದಂತೆ ಪ್ರೇಕ್ಷಕರಿಂದ ಆರಾಧಿಸಲ್ಪಟ್ಟಿದ್ದ ರಾಮಾಯಣ ದಾರಾವಾಹಿಯಂತೂ ಇದು ಖಂಡಿತ ಅಲ್ಲ. ಬದಲಾಗಿ ಸಿನಿಮಾ..!
ಹೌದು. ರಾಮಾಯಣ ದೊಡ್ಡ ತೆರೆಯಲ್ಲಿ ಮೂಡಿಬರಲಿದೆ. ಈ ಹಿಂದೆ ಟಿಪ್ಪು ಸುಲ್ತಾನ್ ಟಿವಿ ದಾರಾವಾಹಿಯನ್ನು ನಿರ್ಮಿಸುವ ಮೂಲಕ ಮುಸ್ಲಿಮರಿಂದ ಸಾಕಷ್ಟು ಟೀಕೆಗೊಳಗಾಗಿ ವಿವಾದ ಎದುರಿಸಿದ್ದ ಸಂಜಯ್ ಖಾನ್ ಈಗ ರಾಮಾಯಣವನ್ನು ಹಿರಿತೆರೆಗೆ ತರಲು ಸಿದ್ಧರಾಗಿದ್ದಾರೆ. ಚಿತ್ರದ ಹೆಸರು ದಿ ಲೆಜೆಂಡ್ ಆಫ್ ರಾಮ.
ರಾಮಾಯಣ ಸಿನಿಮಾ ಎಂದ ಮೇಲೆ ರಾಮ, ಸೀತೆ, ಲಕ್ಷ್ಮಣ ಪಾತ್ರಧಾರಿಗಳು ಯಾರು ಎಂಬ ಕುತೂಹಲ ಸಹಜವೇ. ಈವರೆಗೆ ಜೋಧಾ ಅಕ್ಬರ್ ಸಿನಿಮಾದಲ್ಲಿ ಅಕ್ಬರ್ ಪಾತ್ರದಲ್ಲಿ ಮಿಂಚಿ ಹಲವು ಪ್ರಶಸ್ತಿಗಳನ್ನು ತೆಕ್ಕೆಗೆ ಸೇರಿಸಿದ, ರೊಮ್ಯಾಂಟಿಕ್ ಪಾತ್ರದಷ್ಟೇ ಪೌರಾಣಿಕ ಪಾತ್ರದಲ್ಲೂ ಪ್ರಬುದ್ಧ ಅಭಿನಯ, ಚಾಕಚಕ್ಯತೆ ಪ್ರದರ್ಶಿಸಬಲ್ಲೆ ಎಂದು ತೋರಿಸಿಕೊಟ್ಟ ಹೃತಿಕ್ ರೋಷನ್ ರಾಮನಾಗಲಿದ್ದಾರೆ!
IFM
ಇನ್ನೊಂದು ಇಂಟರೆಸ್ಟಿಂಗ್ ವಿಷಯವೇನೆಂದರೆ ಸಂಜಯ್ ಖಾನ್ರಿಗೆ ಹೃತಿಕ್ ಸಂಬಂಧದಲ್ಲಿ ಅಳಿಯನಾಗಬೇಕು. ಅರ್ಥಾತ್, ಮಗಳು ಸುಸಾನ್ಳ ಗಂಡ ಹೃತಿಕ್. ಅಲ್ಲದೆ, ಸಂಜಯ್ ಖಾನ್ ತನ್ನ ಏಕಮಾತ್ರ ಮಗ ಝಯೇದ್ ಖಾನ್ನನ್ನು ಲಕ್ಷ್ಮಣನ ಪಾತ್ರಧಾರಿಯಾಗಿ ಆರಿಸಿದ್ದಾರೆ. ಸೀತೆ ಯಾರು ಎನ್ನುವುದು ಇನ್ನೂ ನಿಗದಿಯಾಗಿಲ್ಲ. ಜತೆಗೆ ದಶರಥನ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸುವ ಸಂಭವವಿದೆ. ಎರಡು ವರ್ಷದ ಹಿಂದೆಯೇ ಸಂಜಯ್ ಖಾನ್ ಅಮಿತಾಬ್ರನ್ನು ದಶರಥನ ಪಾತ್ರಕ್ಕೆ ಸಂಪರ್ಕಿಸಿದ್ದರು.
ಈ ಚಿತ್ರವನ್ನು ತಯಾರಿಸಲು ಕಳೆದ ಮೂರು ವರ್ಷಗಳಿಂದಲೇ ಸಂಜಯ್ ಖಾನ್ ತಯಾರಿ ನಡೆಸುತ್ತಿದ್ದರಂತೆ. ಆದರೆ, ಸಂಜಯ್ ಅವರಿಗೆ ರಾಮ ಪಾತ್ರಕ್ಕೆ ಸರಿಹೊಂದುವ ಹೀರೋ ಬೇಕಾಗಿತ್ತು. ಅಳಿಯ ಹೃತಿಕ್ ರೋಷನ್ ಅಲ್ಲದೆ ಬೇರಾರು ಈ ಪಾತ್ರಕ್ಕೆ ತಾಳೆಯಾಗಲಿಕ್ಕಿಲ್ಲ ಎಂದು ಮೂರು ವರ್ಷಗಳ ಕಾಲ ಹೃತಿಕ್ರಿಂದ ಡೇಟ್ಸ್ ಪಡೆಯಲು ಕಾದು ಕುಳಿತಿದ್ದರಂತೆ ಸಂಜಯ್ ಖಾನ್! ಕೊನೆಗೂ ಹೃತಿಕ್ ರಾಮಾಯಣಕ್ಕಾಗಿ ಹಾಗೂ ಮಾವನಿಗಾಗಿ ಸಮಯ ಹೊಂದಿಸಿದ್ದಾರಂತೆ.
ಝಯೇದ್ ಹೇಳುವಂತೆ, ಲಕ್ಷ್ಮಣನ ಪಾತ್ರಧಾರಿಯಾಗಿ ನಾನು ತೆರೆಯಲ್ಲಿ ಬರುತ್ತಿರುವುದು ಎರಡನೇ ಬಾರಿ. ಹಿಂದೆ ಮೈ ಹೂಂ ನಾ ಚಿತ್ರದಲ್ಲಿ ಪೌರಾಣಿಕ ಪಾತ್ರವಲ್ಲದಿದ್ದರೂ ಲಕ್ಷ್ಮಣ್ ಹೆಸರಿನಲ್ಲಿ ಕಾಣಿಸಿಕೊಂಡಿದ್ದೆ. ಈಗ ಮತ್ತೆ ಲಕ್ಷ್ಮಣನಾಗುತ್ತಿದ್ದೇನೆ ಎನ್ನುತ್ತಾರೆ.
IFM
ಚಿತ್ರಕಥೆ ರೆಡಿಯಾಗಿದೆಯಂತೆ. ಚಿತ್ರ ಆಧುನಿಕ ರಾಮನ ಬಗ್ಗೆ ಖಂಡಿತಾ ಅಲ್ಲ. ಪೌರಾಣಿಕ ರಾಮನೇ. ಪೌರಾಣಿಕ ಕಥೆಯಾದರೂ ಆಧುನಿಕ ಮನೋಭೂಮಿಕೆಯಲ್ಲಿ ದಿ ಲೆಜೆಂಡ್ ಆಫ್ ರಾಮ ಹೊರಬರಲಿದೆ. ಆದರೆ ಖಂಡಿತಾ ಆಧುನಿಕ ಚಿತ್ರ ಇದಲ್ಲ. ಶೇಕ್ಸ್ಪಿಯರ್ನ ನಾಟಕಗಳಿಂದ ಪ್ರಭಾವಿತರಾಗಿ, ಆ ನಾಟಕಗಳ ಹಲವು ಆಂಗಿಕ ಚಲನೆಗಳು ಈ ರಾಮಾಯಣದಲ್ಲಿ ಮೇಳೈಸಲಿವೆಯಂತೆ.
ಅಂದಹಾಗೆ, ಸಂಜಯ್ ಖಾನ್ ಇಷ್ಟೆಲ್ಲ ತಯಾರಿ ನಡೆಸಿರುವ ಸಂದರ್ಭವೇ, ರಾಜ್ ಕುಮಾರ್ ಸಂತೋಷಿ ಕೂಡಾ ರಾಮಾಯಣ ಚಿತ್ರ ನಿರ್ಮಿಸುವ ಪ್ರಕರಣೆ ನೀಡಿದ್ದಾರೆ. ರಾಜ್ ಕುಮಾರ್ ಸಂತೋಷಿ ಚಿತ್ರದಲ್ಲಿ ಅಜಯ್ ದೇವಗನ್ ರಾಮನಾಗಿ, ಸೀತೆಯಾಗಿ ಕಾಜೋಲ್ ಹಾಗೂ ಲಕ್ಷ್ಮಣನಾಗಿ ರಿತೇಶ್ ದೇಶ್ಮುಖ್ ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆ ಲವ ಕುಶ ಎಂಬ ಚಿತ್ರದಲ್ಲಿ ಜಿತೇಂದ್ರ ಹಾಗೂ ಜಯಪ್ರದಾ ರಾಮಸೀತೆಯರಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಆದರೆ ರಾಮಾಯಣದ ಕಥೆ ಈವರೆಗೆ ಸಿನಿಮಾ ರೂಪದಲ್ಲಿ ಬಂದಿರಲಿಲ್ಲ. ಈಗ ಎರಡು ಚಿತ್ರಗಳು ದೊಡ್ಡ ದೊಡ್ಡ ಬ್ಯಾನರ್ನಲ್ಲೇ ರೂಪುಗೊಳ್ಳಲಿವೆ. ಪ್ರೇಕ್ಷಕರು ಯಾವ ರಾಮನ ಪಾದಕ್ಕೆ ಮರಳುತ್ತಾರೋ ಕಾಯಬೇಕು.