ನೃತ್ಯಪಟು ನಟ ಶ್ರೀಧರ್ ಭಾರೀ ಸಮಯದ ನಂತರ ಬುದ್ದಿವಂತ ಚಿತ್ರದಲ್ಲಿ ಉಪ್ಪಿಯ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವಕಾಶಗಳೇನೋ ಸಾಕಷ್ಟು ಅರಸಿಕೊಂಡು ಬರುತ್ತದೆ. ಆದರೆ ಪಾತ್ರಗಳಲ್ಲಿ ಸತ್ವವಿಲ್ಲದ ಕಾರಣ ಒಪ್ಪಿಕೊಳ್ಳುವುದಿಲ್ಲ. ನೃತ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ನನಗೆ ಸಿನಿಮಾ ಯಾವತ್ತಿಗೂ ಮುಖ್ಯವೆನಿಸಿಲ್ಲ ಎನ್ನುತ್ತಾರೆ ಶ್ರೀಧರ್.
ಮನಸ್ಸಿಗೆ ಒಪ್ಪಿಗೆಯಾಗದಿದ್ದರೆ ನಾನು ಸಿನಿಮಾ ಒಪ್ಪಿಕೊಳ್ಳುವುದಿಲ್ಲ ಎಂದು ತಮ್ಮ ನಿಲುವನ್ನು ಶ್ರೀಧರ್ ಸ್ಪಷ್ಟಪಡಿಸಿದರು. ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವ ಮುನ್ನವೇ ಶ್ರೀಧರ್ ನೃತ್ಯ, ಸಂಗೀತದಲ್ಲಿ ಪರಿಣತಿ ಪಡೆದಿದ್ದರು. ಕಳೆದ 10 ವರ್ಷಗಳಿಂದೀಚೆಗೆ ಅವರು ಸಂಪೂರ್ಣವಾಗಿ ನೃತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ತಮ್ಮ ತಂಡದೊಂದಿಗೆ ಸಾವಿರಾರು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಇದೀಗ ಭಾರತೀಯ ನೃತ್ಯ ಪ್ರಕಾರಗಳನ್ನು ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಪಿಎಚ್ಡಿಗೆ ಸಂಬಂಧಪಟ್ಟಂತೆ ಮಾಹಿತಿ ಕಲೆಹಾಕುವ ಕಾರ್ಯ ಆರಂಭವಾಗಿದೆ.
ಈ ಮಧ್ಯೆ ಮನಸ್ಸಿಗೆ ಒಪ್ಪಿಗೆಯಾಗುವ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಶ್ರೀಧರ್ ಶಂಕಾರಾಚಾರ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಪಿಎಚ್ಡಿ ಕಾರಣದಿಂದ ನಟಿಸುತ್ತಿಲ್ಲ.