ಕನ್ನಡ ಚಿತ್ರರಂಗದ ಜನಪ್ರಿಯ ಖಳನಾಯಕ ಸುಧೀರ್ ಪುತ್ರ ತರುಣ್ ಈಗ ಬ್ರೇಕ್ನ ನಿರೀಕ್ಷೆಯಲ್ಲಿದ್ದಾರೆ. ಮೊನ್ನೆ ತಾನೇ ಬಿಡುಗಡೆಗೊಂಡ ನವಗ್ರಹ ಚಿತ್ರದಲ್ಲಿ ಅವರಿಗೆ ವಿಶಿಷ್ಟ ಪಾತ್ರವಿದೆ. ಈ ಹಿಂದೆ ಇವರು ನಟಿಸಿದ ವಿದ್ಯಾರ್ಥಿ ಪಾತ್ರ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿತ್ತು.
ನವಗ್ರಹ ಚಿತ್ರ, ಚಿತ್ರತಂಡದ ಬಗ್ಗೆ ತರುಣ್ ಖುಷಿಯಿಂದ ಮಾತನಾಡುತ್ತಾರೆ. ಅದೊಂದು ಅದ್ಬುತ ಅನುಭವ ಗೆಳೆಯರ ಜೊತೆ ಸೇರಿಕೊಂಡು ಅಭಿನಯಿಸಿದ್ದು ಖುಷಿಯ ಸಂಗತಿ ಎನ್ನುವ ತರುಣ್ ಉತ್ತಮ ಬ್ಯಾನರ್, ನಿರ್ದೇಶನ ಹಾಗೂ ಉತ್ತಮ ಕಥೆಯಿಂದಾಗಿ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಾರೆ.
ವಿದ್ಯಾರ್ಥಿ ಚಿತ್ರದ ಸೋಲಿನ ಬಗ್ಗೆ ಮಾತನಾಡುತ್ತಾ, ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ. ನಿರ್ದೇಶಕರು ಸೇರಿದಂತೆ ಪ್ರತಿಭಾನಿತ್ವರ ಟೀಮ್ ನಮ್ಮದಾಗಿತ್ತು. ಆದರೆ ಅದೇ ಸಮಯದಲ್ಲಿ ಕಾವೇರಿ ಗಲಾಟೆ ಆಗಿದ್ದು, ಬಹುಶಃ ಸೋಲಿಗೆ ಕಾರಣವಾಗಿರಬಹುದು ಎನ್ನುತ್ತಾರೆ.
ಹೊಸಬರರಿಂದ ಹಳಬರಿಗೆ ಸ್ಪರ್ಧೆ ಇದೆಯೇ ಎಂಬ ಪ್ರಶ್ನೆಗೆ, ಎಷ್ಟು ಜನ ಬಂದರೂ ಅವಕಾಶ ನೀಡುವ ಶಕ್ತಿ ಕನ್ನಡ ಚಿತ್ರರಂಗಕ್ಕಿದೆ. ಸ್ಪರ್ಧೆ ಯಾವತ್ತಿಗೂ ಒಳ್ಳೆಯದು ಎಂದರು.
ಸುಧೀರ್ ನವಗ್ರಹ ಸೇರಿದಂತೆ ಒಟ್ಟು ಒಂಭತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ಶಿವಣ್ಣನ ಜೊತೆ ಚೆಲುವೆಯೇ ನಿನ್ನ ನೋಡಲು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.