ಮತ್ತೊಮ್ಮೆ ಮಂದಾಕಿನಿ ತೆರೆಮೇಲೆ ರಾರಾಜಿಸಲಿದೆ. ಮೊನ್ನೆ ತಾನೆ ಬಿಡುಗಡೆಗೊಂಡು ಮೂರೇ ದಿನದಲ್ಲಿ ಚಿತ್ರಮಂದಿರಗಳಿಂದ ಎತ್ತಂಗಡಿಯಾದ ಚಿತ್ರ ಮತ್ತೆ ತೆರೆಕಾಣುತ್ತದೆಯೇ ಎಂದು ಆಶ್ವರ್ಯ ಆಗಬಹುದು. ಆದರೆ ಡಿಸೆಂಬರ್ನಲ್ಲಿ ಮತ್ತೊಮ್ಮೆ ಚಿತ್ರ ಬಿಡುಗಡೆ ಮಾಡುತ್ತೇನೆಂದು ಹೇಳುತ್ತಾರೆ ನಿರ್ದೇಶಕ ಸುರ್ವೆ.
ಕಳೆದ ಬಾರಿ ಇವರು ಚಿತ್ರ ಬಿಡುಗಡೆ ಮಾಡಿದಾಗ ಅನೇಕ ಚಿತ್ರಗಳು ಬಿಡುಗಡೆಯಾಗಿರುವುದರ ಜೊತೆಗೆ ಥಿಯೇಟರ್ ಸಮಸ್ಯೆ ಕೂಡಾ ಇತ್ತಂತೆ. ಸೂಕ್ತ ಪ್ರಚಾರವೂ ಚಿತ್ರಕ್ಕೆ ಸಿಗಲಿಲ್ಲ. ಈ ಬಾರಿ ಉತ್ತಮ ಪ್ರಚಾರ ಮಾಡಿ ಮತ್ತೊಮ್ಮೆ ಚಿತ್ರ ಬಿಡುಗಡೆ ಮಾಡುತ್ತೇನೆ. ಈ ಚಿತ್ರವನ್ನು ಖಂಡಿತ ಜನ ನೋಡುತ್ತಾರೆ ಎನ್ನುವ ಬಲವಾದ ವಿಶ್ವಾಸವನ್ನು ನಿರ್ದೇಶಕರು ವ್ಯಕ್ತಪಡಿಸುತ್ತಾರೆ. ಆದರೆ ಅದು ಯಾವ ರೀತಿ ಎಂದು ಅವರಿಗೇ ಗೊತ್ತು.
ಈ ಬಗ್ಗೆ ನಿರ್ಮಾಪಕ ಶ್ರೀನಿವಾಸ್ ಅವರನ್ನು ಪ್ರಶ್ನಿಸಿದರೆ ಅವರು ಕೆಂಡ ಮಂಡಲರಾಗುತ್ತಾರೆ. ನನಗೆ ಈ ವಿಷಯ ಗೊತ್ತಿಲ್ಲ. ಆ ಚಿತ್ರವನ್ನು ನಾನು ಕಂಡ ಒಂದು ದು:ಸ್ವಪ್ನ ಎಂದು ಭಾವಿಸುತ್ತೇನೆ. ಮೂರು ಕೋಟಿ ರೂ.ವನ್ನು ಅನಾವಶ್ಯಕವಾಗಿ ವ್ಯಯಿಸಬೇಕೆಂದು ನನ್ನ ಹಣೆಯಲ್ಲಿ ಬರೆದಿತ್ತು. ಅದರಂತೆ ಆಯಿತು ಎಂದು ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ.
ಇವರು ಇನ್ನು ಸಿನಿಮಾ ರಂಗದ ಸಹವಾಸಕ್ಕೆ ಬರುವುದಿಲ್ಲವಂತೆ. ಏನೂ ತಿಳಿಯದೇ ಸಿನಿಮಾ ರಂಗಕ್ಕೆ ಬರುವವರಿಗೆ ಇವರು ಬುದ್ದಿವಾದ ಹೇಳುತ್ತಿದ್ದಾರೆ. ಹೇಗಿದೆ ಮಂದಾಕಿನಿಯ ಪ್ರಭಾವ.