ಪೂಜಾ ಗಾಂಧಿ ದೊಡ್ಡಗುಣ
ಪೂಜಾ ಗಾಂಧಿ ಈಗ ಪಕ್ಕ ಬೆಂಗಳೂರಿನವರಾಗಿದ್ದಾರೆ. ಕನ್ನಡವನ್ನು ಕೂಡಾ ಚೆನ್ನಾಗಿಯೇ ಮಾತನಾಡುತ್ತಾರೆ. ತಮ್ಮ ಚಿತ್ರಕ್ಕೆ ಸ್ವತಃ ಡಬ್ ಮಾಡಿದ್ದಾರೆ. ಆದರೆ ಈಗ ವಿಷಯ ಅದಲ್ಲ. ಪ್ರತಿಷ್ಠಿತ ಬೆಂಗಳೂರು ಪುಸ್ತಕೋತ್ಸವಕ್ಕೆ ಪೂಜಾ ಗಾಂಧಿ ವಿಶೇಷ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಇದು ನಟಿಯೊಬ್ಬಳ ಖ್ಯಾತಿ ಹಾಗೂ ಆಕೆಯ ಸೌಜನ್ಯಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಲ್ಲ. ಕನ್ನಡ ಚಿತ್ರರಂಗದಲ್ಲಿ ಈಕೆ ಈಗ ಸದ್ಯ ಬೇಡಿಕೆಯ ನಟಿ. ಕೈಯಲ್ಲಿ ಒಂದಷ್ಟು ಆಫರ್ಗಳ ನಡುವೆಯೂ ಈಕೆ ರಾಯಭಾರಿಯಾಗಿ ಒಪ್ಪಿಕೊಂಡಿದ್ದಾರೆ. ಕನ್ನಡದ ಕೆಲ ನಟ-ನಟಿಯರು ಫ್ಲಾಪ್ ಚಿತ್ರ ನೀಡಿದರೂ ಅವರನ್ನು ಏನಾದರೂ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಅಥವಾ ಇಂತಹ ಕಾರ್ಯಕ್ರಮಗಳಿಗೆ ಕೇಳಿಕೊಂಡರೆ ಅವರಿಂದ ಮೊದಲು ಬರುವ ಪ್ರಶ್ನೆ ಎಷ್ಟು ಕೊಡುತ್ತೀರಿ? ಆದರೆ ನಮ್ಮ ಪೂಜಾ ಇದಕ್ಕೆ ಹೊರತಾಗಿದ್ದಾರೆ. ಯಾವುದೇ ಹಣದ ಬೇಡಿಕೆ ಮುಂದಿಡದೇ ಉಚಿತವಾಗಿ ಪುಸ್ತಕೋತ್ಸವದ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ. ಕನ್ನಡ ಚಿತ್ರರಂಗ ಈಕೆಯ ಪ್ರತಿಭೆಯನ್ನು ಚೆನ್ನಾಗಿ ಉಪಯೋಗಿಸಿಕೊಂಡಂತೆ ಈಕೆಯೂ ಕನ್ನಡತಿಯಾಗುತ್ತಿದ್ದಾರೆ. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಪುಸ್ತಕ ಓದುವ ಹವ್ಯಾಸವಿರುವ ಈಕೆ ಪುಸ್ತಕೋತ್ಸವಕ್ಕೆ ರಾಯಭಾರಿಯಾಗಿ ಕೇಳಿಕೊಂಡಾಗ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ."
ನಾನು ಪುಸ್ತಕ ಓದ್ತೀನಿ ಮತ್ತೆ ನೀವು?" ಎಂಬುದು ಈ ಬೆಡಗಿಯ ಸ್ಲೋಗನ್. ಮಳೆಯಲ್ಲಿ ಮಿಂದೆದ್ದ ಕೆಲ ನಟರು ಒಂದು ಶಾಪ್ ಉದ್ಘಾಟನೆಗೆ 1 ರಿಂದ 2 ಲಕ್ಷ ಕೇಳುತ್ತಿರುವಾಗ ಪೂಜಾರ ಗುಣ ನಿಜಕ್ಕೂ ದೊಡ್ಡದು.