ಕಳೆದ ವರ್ಷ ಕನ್ನಡ ಚಿತ್ರರಂಗ ಕಂಡ ಕೆಲವೇ ಉತ್ತಮ ಚಿತ್ರಗಳ ಸಾಲಿನಲ್ಲಿ ಆ ದಿನಗಳು ಕೂಡಾ ಒಂದು. ಚೈತನ್ಯ ನಿರ್ದೇಶನದ ಈ ಚಿತ್ರ ಒಂದು ಹೊಸ ಟ್ರೆಂಡ್ ಅನ್ನೇ ಸೃಷ್ಟಿಸಿತ್ತು.
ರಕ್ತಪಾತವಿಲ್ಲದೇ ಪ್ರೀತಿಯ ಜೊತೆಗೆ ಅಂಡರ್ವರ್ಲ್ಡ್ ಯಾವ ರೀತಿ ತೋರಿಸಬಹುದು ಎಂಬುದನ್ನು ಚೈತನ್ಯ ಈ ಚಿತ್ರದಲ್ಲಿ ತೋರಿಸಿದ್ದರು.
ಈ ಚಿತ್ರದ ಮೂಲಕ ಚೇತನ್ ಎಂಬ ಒಬ್ಬ ವಿವೇಕಯುತ ನಟ ಕೂಡಾ ಕನ್ನಡಕ್ಕೆ ದಕ್ಕಿದ್ದರು ಎಂದರೆ ತಪ್ಪಲ್ಲ. ಆ ದಿನಗಳು ಚಿತ್ರ ಹಿಟ್ ಆಗುತ್ತಿದ್ದಂತೆ ಚೇತನ್ಗೆ ಆಫರ್ಗಳ ಸುರಿಮಳೆಯೇ ಬಂತು. ಒಂದು ಮೂಲದ ಪ್ರಕಾರ ಅವರು ನಯವಾಗಿ ತಿರಸ್ಕರಿಸಿದ ಚಿತ್ರಗಳು ಸಂಖ್ಯೆ ಸುಮಾರು 55. ನಂತರ ಹರ್ಷ ನಿರ್ದೇಶನದ ಬಿರುಗಾಳಿ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ಇನ್ನಷೇ ತೆರೆ ಕಾಣಬೇಕಿದೆ.
ಈ ಮಧ್ಯೆ ಚೈತನ್ಯ ಮತ್ತೊಂದು ಚಿತ್ರ ನಿರ್ದೇಶಿಸಲು ಮುಂದಾಗಿದ್ದು, ಈ ಚಿತ್ರಕ್ಕೂ ಚೇತನ್ ಆಯ್ಕೆಯಾಗಿದ್ದಾರೆ. ಮತ ಹಾಕಲೆಂದು ಅಮೆರಿಕಾಕ್ಕೆ ಹೋಗಿರುವ ಚೇತನ್ ನಗರಕ್ಕೆ ಬಂದ ಕೂಡಲೇ ಚಿತ್ರೀಕರಣ ಆರಂಭವಾಗಲಿದೆ. ಮೊನ್ನೆ ತಾನೇ ಅಗ್ನಿ ಶ್ರೀಧರ್ ಬಳಗದಿಂದ ಸ್ಲಂ ಬಾಲ ಎಂಬ ಒಂದು ಉತ್ತಮ ಚಿತ್ರ ಬಿಡುಗಡೆಯಾಗಿತ್ತು. ಈ ಬಾರಿ ಚೈತನ್ಯ ಯಾವ ರೀತಿಯ ಚಿತ್ರ ನಿರ್ದೇಶಿಸುತ್ತಾರೆ ಎಂದು ಕಾದು ನೋಡಬೇಕು.