ಶಿವಧ್ವಜ್ ನಟಿಸಿದ ಶುಭಂ ಚಿತ್ರ ತಮಿಳಿಗೆ ಡಬ್ ಆಗುತ್ತಿದೆ. ಕನ್ನಡದಲ್ಲಿ ಬಂದ ಈ ಚಿತ್ರದಲ್ಲಿ ಸಂಜನಾ ನಾಯಕಿಯಾಗಿದ್ದು, ಬಿಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಮಾತ್ರ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿತು. ಚಿತ್ರವನ್ನು ನಿರ್ದೇಶಿಸಿದ ರವಿ ಆರ್.ಗಿರಣಿ ಅವರೇ ಚಿತ್ರದ ಹಕ್ಕುಗಳನ್ನು ಪಡೆದಿದ್ದರು. ಇದೀಗ ಅವರು ಈ ಚಿತ್ರವನ್ನು ತಮಿಳು, ತೆಲುಗು ಹಾಗೂ ಮಲೆಯಾಳಂಗೆ ಡಬ್ ಮಾಡಲು ಯೋಚಿಸಿದ್ದಾರೆ.
ಮೊದಲ ಪ್ರಯೋಗವಾಗಿ ಮುಂದಿನ ತಿಂಗಳು ಕಾದಲ್ ಯೋಗಿ ಎಂಬ ಟೈಟಲ್ನಡಿ ಚಿತ್ರ ತಮಿಳಿಗೆ ಡಬ್ ಆಗುತ್ತಿದೆ. ಚಿತ್ರದ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ಸಿಗಬಹುದು ಎಂಬ ನಂಬಿಕೆ ನಿರ್ದೇಶಕರದ್ದು.
ಶುಭಂ ಸೋಲಿನ ನಂತರ ರವಿ ಆರ್.ಗಿರಣಿ ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಅವರ ನಿರ್ಮಾಣದ ಕಸ್ತೂರಿ ಧಾರಾವಾಹಿ ಈಗ 300 ಸಂಚಿಕೆಗಳನ್ನು ಪೂರೈಸುತ್ತಿದೆಯಂತೆ. ಗಣೇಶ್ ಹೊಂದುಂತಹ ಸ್ಕ್ರಿಪ್ಟ್ ಸಿದ್ದಪಡಿಸಿ ಮುಂದಿನ ಏಪ್ರಿಲ್ನಲ್ಲಿ ಚಿತ್ರವೊಂದನ್ನು ರವಿ ನಿರ್ದೇಶಿಸಲಿದ್ದಾರಂತೆ.