ಗೋಲ್ಡನ್ ಸ್ಟಾರ್ ಗಣೇಶ್ ಇದೀಗ ತೆರೆಯ ಹಿಂದಿನ ಕಾರ್ಯಕ್ಕೆ ತೆರಳಿದ್ದಾರೆ. ಅಂದರೆ ಅಚ್ಚರಿಯಾಗಬಹುದು. ಹೌದು ಗಣೇಶ್ ಇದೀಗ ನಿರ್ಮಾಣಕ್ಕಿಳಿದಿದ್ದಾರೆ. ಇದಕ್ಕೆ ಇವರ ಗೃಹಮಂತ್ರಿ ಶಿಲ್ಪಾ ಸಾಥ್ ನೀಡಲಿದ್ದಾರೆ.
ಇದು ಹಳೆ ಸುದ್ದಿಯಾಗಿರಬಹುದು. ಆದರೆ ಇದೀಗ ಗಣೇಶ್ ಕಡೆಯಿಂದ ಮತ್ತೊಂದು ಸುದ್ದಿ ಬಂದಿದೆ. ಗಣೇಶ್ ಹಾಗೂ ಮುಂಗಾರು ಮಳೆ ಚಿತ್ರದ ಕತೆಗಾರ ಪ್ರೀತಂ ಗುಬ್ಬಿ ಮತ್ತೆ ಒಂದಾಗಿದ್ದಾರೆ. ಚಿತ್ರ ಹೆಸರು ಮಳೆಯಲಿ ಜೊತೆಯಲಿ. ಸೆಂಟಿಮೆಂಟಲ್ ಲವ್ ಸ್ಟೋರಿ ಜೊತೆಗೆ ತಣ್ಣನೆ ಮಳೆ ಜತೆಗೆ ಕಚಗುಳಿ ಇಡುವ ಕಾಮಿಡಿ ಎಲ್ಲವೂ ಇಲ್ಲಿದೆ.
ಗಣೇಶ್ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವುದರಿಂದ ಹೆಗಲ ಮೇಲೆ ಬೆಳೆ ಬೆಟ್ಟದಷ್ಟು ಜವಾಬ್ದಾರಿ ಬಿದ್ದಿದೆ. ಕತೆ ಚಿತ್ರಕತೆ ತಯಾರಾಗಿದ್ದು, ಗಣೇಶ್ ನಾಯಕನ ಸ್ಥಾನದಲ್ಲಿ ಕುಳಿತಿದ್ದಾರೆ. ನಾಯಕಿಯ ಹುಡುಕಾಟ ನಡೆದಿದೆ. ಚಿತ್ರಕ್ಕೆ ಮುಂಗಾರು ಮಳೆಯ ಕೃಷ್ಣ ಛಾಯಾಗ್ರಾಹಣ. ಒಟ್ಟಿನಲ್ಲಿ ಗಣೇಶ್ ಮತ್ತೊಮ್ಮೆ ಮಳೆಯಲ್ಲಿ ಮಿಂದು ಜೊತೆಯಾಗಲು ಹೊಸ ಹುರುಪಿನೊಂದಿಗೆ ಹೆಜ್ಜೆ ಇರಿಸಿದ್ದಾರೆ.