ರಘುರಾಮ್ ನಿರ್ದೇಶನದ ಶಿವಣ್ಣ, ಹರಿಪ್ರಿಯಾ ಅಭಿನಯದ ಚೆಲುವೆಯೇ ನಿನ್ನೇ ನೋಡಲು ಚಿತ್ರ ಸದ್ಯಕ್ಕೆ ಬಿಡುಗಡೆಯಾಗುವ ಸಂಭವ ಕಂಡುಬರುತ್ತಿಲ್ಲ. ಯಾಕೆಂದರೆ ನಿರ್ಮಾಪಕರಾದ ಎನ್.ಎಂ. ಸುರೇಶ್ ಖಜಾನೆ ಖಾಲಿಯಾಗಿದೆಯಂತೆ. ಇತ್ತೀಚೆಗಷ್ಟೆ ಬಿಡುಗಡೆಯಾದ ವಿಜಯ್ ರಾಘವೇಂದ್ರ ಅಭಿನಯದ ಕಾರಂಜಿ ಚಿತ್ರಕ್ಕೆ ದುಡ್ಡು ಸುರಿದು ಬರಿದಾಗಿ ಕೂತಿದ್ದಾರಂತೆ. ಹಾಗೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ಬಜೆಟ್ ಆಗಿದೆಯಂತೆ.
ಬಹು ನಿರೀಕ್ಷೆಗಳನ್ನು ಇಟ್ಟುಕೊಂಡು ಮಾಡಿದ ಕಾರಂಜಿ ಚಿತ್ರ ಯಶಸ್ಸು ಗಳಿಸುತ್ತದೆ. ಅದರಲ್ಲಿ ಬಂದ ಹಣದಿಂದ ಚೆಲುವೆಯೇ ನಿನ್ನೇ ನೋಡಲು ಚಿತ್ರ ಮಾಡಬಹುದು ಎಂದು ನಿರ್ಮಾಪಕ ರಮೇಶ್ ಅಂದುಕೊಂಡಿದ್ದರಂತೆ. ಆದರೆ ಅವರು ಅಂದುಕೊಂಡಿದ್ದು ತಲೆ ಕೆಳಗಾಗಿದೆ. ನಿರ್ದೇಶಕ ರಘುರಾಮ್ ಮಾತ್ರ ಸುರೇಶ್ ತಮ್ಮ ಚಿತ್ರಕ್ಕೆ ಯಾವುದೇ ತೊಂದರೆ ಮಾಡಿಲ್ಲ ಕೇಳಿದ್ದನ್ನೆಲ್ಲ ಒದಗಿಸಿಕೊಟ್ಟಿದ್ದಾರೆ. ಅವರು ಸಾಕ್ಷಾತ್ ಕಲ್ಪವೃಕ್ಷ ಇದ್ದ ಹಾಗೆ ಎಂದು ಹೇಳುತ್ತಿದ್ದಾರೆ.
ಚೆಲುವೆಯೇ ನಿನ್ನೇ ನೋಡಲು ಚಿತ್ರದ ಚಿತ್ರೀಕರಣ 90 ಭಾಗದಷ್ಟು ಮುಗಿದಿದೆಯಂತೆ. ಇತ್ತೀಚೆಗಷ್ಟೆ ಇಟಲಿಯಲ್ಲಿ ಚಿತ್ರೀಕರಣ ಮುಗಿಸಿ ದೇಶಕ್ಕೆ ವಾಪಸ್ಸಾಗಿದೆ. ಚಿತ್ರ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿಯೇ ಮೂಡಿ ಬಂದಿದೆ ಎನ್ನುತ್ತಾರೆ ಚಿತ್ರದ ನಾಯಕಿ ಹರಿಪ್ರಿಯಾ. ಒಟ್ಟಿನಲ್ಲಿ ಎಲ್ಲ ಅಂದುಕೊಂಡಂತೆ ಆಗಿ ಚಿತ್ರ ಆದಷ್ಟು ಬೇಗ ಬಿಡುಗಡೆಯಾಗಲಿ ಅನ್ನೋದೆ ಎಲ್ಲರ ಹಾರೈಕೆ.