ನಿರ್ಮಾಪಕ ಕೆ. ಮಂಜು ಅವರ ಬಹುದಿನದ ಆಸೆ ಈಡೇರಿದೆ. ತಾವೊಂದು ಚಿತ್ರದಲ್ಲಿ ನಟಿಸಬೇಕು ಎಂದು ಜಮಾನದಿಂದ ಹೇಳಿಕೊಂಡು ಬರುತ್ತಿದ್ದರು. ತಮ್ಮದೇ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಕಿಚ್ಚ ಹುಚ್ಚ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಗಾಂಧಿನಗರದಲೆಲ್ಲ ಹಬ್ಬಿತ್ತು. ಆದರೆ ಮಂಜು ವಿಲನ್ ಆಗಿ ಕಾಣಿಸಿಕೊಳ್ಳುವುದು ಅವರ ಪತ್ನಿಗೆ ಇಷ್ಟವಿರಲಿಲ್ಲವಂತೆ. ಹಾಗಾಗಿ ಅದನ್ನು ಡ್ರಾಪ್ ಮಾಡಿದ್ದರು.
ಈ ಹಿಂದೆ ಆಟೋ ಮಂಜು ಚಿತ್ರದಲ್ಲಿ ಮಂಜು ನಟಿಸಬೇಕಿತ್ತು. ಅದೂ ಕೂಡ ಸಾಧ್ಯವಾಗಲಿಲ್ಲ. ಮಂಜುಗೆ ನಟನೆ ಅಂದರೆ ತುಂಬಾ ಇಷ್ಟವಂತೆ. ಅವರಿಗಾಗಿ ಒಂದು ಉತ್ತಮ ಕಥೆಯನ್ನು ತಯಾರು ಮಾಡಿ ಅಂಥಾ ಕೆಲವರಿಗೆ ಹೇಳಿದ್ದರಂತೆ. ರಾಜ್ ಚಿತ್ರದಲ್ಲಿ ನಟಿಸಲು ಮಂಜುಗೆ ಪ್ರೇಮ್ ಕೇಳಿದ್ದರಂತೆ. ಯಾಕೋ ಆದರಲ್ಲೂ ಅವರ ಹೆಂಡತಿ ನಟಿಸುವುದು ಬೇಡ ಅಂದಿದ್ದರೇನೋ ಗೊತ್ತಿಲ್ಲ. ಅಂತೂ ಆ ಚಿತ್ರದಲ್ಲೂ ನಟಿಸಲಿಲ್ಲ.
ಇದೀಗ ಬುಲೆಟ್ ಪ್ರಕಾಶ್ ಮತ್ತು ಜೆ.ಜಿ.ಕೃಷ್ಣ ಜೊತೆಯಾಗಿ ನಿರ್ಮಿಸುತ್ತಿರುವ ಐತಲಕಡಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅದೂ ತಮ್ಮ ನಿಜ ಜೀವನದ ಪಾತ್ರ. ಅಂದರೆ ನಿರ್ಮಾಪಕರಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ಕಂಠೀರವ ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ತಮ್ಮ ಪಾಲಿನ ಪಾತ್ರ ಅಭಿನಯಿಸಿ ಹೋಗಿದ್ದಾರೆ. ಈಗ ಮಂಜು ಸ್ವಲ್ಪ ನೆಮ್ಮದಿಯಾಗಿ ನಿದ್ದೆ ಮಾಡಬಹುದೇನೋ...