ಶ್ರೀನಗರ ಕಿಟ್ಟಿಗೆ ಅದೇನ್ ಲಕ್ಕು ಖುಲಾಯಿಸಿದಿಯೋ ಗೊತ್ತಿಲ್ಲ. ಒಂದರ ಹಿಂದೊಂದರಂತೆ ಚಿತ್ರಗಳಲ್ಲಿ ನಾಯಕನಾಗಿ ನಟಿಸುವ ಆಫರ್ಗಳ ಸುರಿಮಳೆಯೇ ಸುರಿಯುತ್ತಿದೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಮಠ ನಿರ್ದೇಶನ ಮಾಡುತ್ತಿರುವ ಮರಳಿ ಮರೆಯಾಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಗೊತ್ತಾಗಿತ್ತು. ಈಗ ಮತ್ತೊಂದು ಹೊಸ ವಿಷಯವೆಂದರೆ ನಾಗಶೇಖರ್ ನಿರ್ದೇಶನ ಮಾಡುತ್ತಿರುವ ಸಂಜು ವೆಡ್ಸ್ ಗೀತಾ ಅನ್ನೋ ಚಿತ್ರದಲ್ಲಿ ನಟಿಸಲು ಓಕೆ ಎಂದಿದ್ದಾರಂತೆ.
ನಿರ್ದೇಶಕ ನಾಗಶೇಖರ್ ಮೂರು ವರ್ಷಗಳ ಹಿಂದೆಯೇ ಈ ಚಿತ್ರ ಮಾಡಲು ಪ್ಲಾನ್ ಮಾಡಿದ್ದರಂತೆ. ವಿಜಯ್ ರಾಘವೇಂದ್ರ ನಾಯಕ ಎಂದು ನಿರ್ಧರಿಸಿ ಅವರಿಂದ ಒಪ್ಪಿಗೆಯನ್ನು ಪಡೆಯಲಾಗಿತ್ತು. ಆದರೆ ಏನು ಕಾರಣವೋ ಚಿತ್ರ ಅಲ್ಲಿಗೆ ಸ್ಟಾಪ್ ಆಗಿತ್ತು. ಈಗ ಮತ್ತೆ ಚಾಲನೆ ದೊರೆತು ಕಿಟ್ಟಿಯನ್ನು ನಾಯಕನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಕಿಟ್ಟಿಗೆ ಈ ಚಿತ್ರದಲ್ಲಿ ನಟಿಸುವ ಅದೃಷ್ಟ ಇತ್ತು ಅಂತ ಕಾಣುತ್ತೆ. ಚಿತ್ರ ಸೆಪ್ಟೆಂಬರ್ನಲ್ಲಿ ಆರಂಭವಾಗಲಿದೆಯಂತೆ.
ಕಿಟ್ಟಿ ಅಭಿನಯದ ಸವಾರಿ ಚಿತ್ರ ಶತದಿನೋತ್ಸವ ಬಾರಿಸಲು ಸಜ್ಜಾಗುತ್ತಿದ್ದರೆ, ಒಲವೇ ಜೀವನ ಲೆಕ್ಕಾಚಾರ ಚಿತ್ರ 25 ದಿನ ಪೂರೈಸಲು ಹೆಜ್ಜೆ ಇಡುತ್ತಿದೆ. ಮಳೆ ಬರಲಿ ಮಂಜೂ ಇರಲಿ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಮರಳಿ ಮರೆಯಾಗಿ ಚಿತ್ರ ಇನ್ನೇನು ಆರಂಭವಾಗಲಿದೆ. ಒಟ್ಟಿನಲ್ಲಿ ಕಿಟ್ಟಿಗೀಗ ಕೈ ತುಂಬಾ ಕೆಲಸ.